ಗೌರಿಬಿದನೂರು: ನಗರದ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮಂಗಳವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಶ್ವತ್ಥನಾರಾಯಣರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ನಾಗರಾಜ್ ಆಯ್ಕೆಯಾದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಒಟ್ಟು 17 ನಿರ್ದೇಶಕರಿದ್ದಾರೆ. ಇದರಲ್ಲಿ ಕಾಂಗ್ರೆಸ್ ಬೆಂಬಲಿತ 11, ಬಿಜೆಪಿಯ 5 ಹಾಗೂ ಜೆಡಿಎಸ್ ಬೆಂಬಲಿತ ಒಬ್ಬ ನಿರ್ದೇಶಕರಿದ್ದರು. ಇವರಲ್ಲಿ ಕಾಂಗ್ರೆಸ್ನ ಸದಸ್ಯ ಶ್ರೀಕರ್ ಸಭೆಗೆ ಗೈರಾಗಿದ್ದರಿಂದ ಒಟ್ಟು 16 ಜನ ಚುನಾವಣೆಯಲ್ಲಿ ಮತ ಚಲಾಯಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶ್ವತ್ಥನಾರಾಯಣರೆಡ್ಡಿ ಹಾಗೂ ಬಿಜೆಪಿ ಬೆಂಬಲಿತ ಶಂಕರಪ್ಪ ನಾಮಪತ್ರ ಸಲ್ಲಿಸಿದ್ದರು. ಅಶ್ವತ್ಥನಾರಾಯಣರೆಡ್ಡಿ 9 ಹಾಗೂ ಶಂಕರಪ್ಪ 7 ಮತಗಳನ್ನು ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ನಾಗರಾಜು ಹಾಗೂ ಬಿಜೆಪಿ ಬೆಂಬಲಿತ ಅಶೋಕ್ ಸ್ಪರ್ಧಿಸಿದ್ದರು. ಅಂತಿಮವಾಗಿ ನಾಗರಾಜು 10 ಮತಗಳನ್ನು ಪಡೆದರೆ, ಅಶೋಕ್ 6 ಮತಗಳನ್ನು ಪಡೆದರು.
ಮುಖಂಡರಾದ ಹನುಮಂತರೆಡ್ಡಿ, ಪ್ರಕಾಶ್ರೆಡ್ಡಿ, ಕೇಶವರೆಡ್ಡಿ, ರಾಘವೇಂದ್ರ ಹನುಮಾನ್, ಸಬ್ದರ್ ಹುಸೇನ್, ರಾಮ್ ಬಾಬು, ವೆಂಕಟರಮಣ, ವೇದಲವೇಣಿ ವೇಣು ಉಪಸ್ಥಿತರಿದ್ದರು.
‘ಆಪರೇಷನ್ ಕಮಲಕ್ಕೆ ಸೋಲು’
ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಬಿಜೆಪಿ ಪಕ್ಷದವರು ಆಪರೇಷನ್ ಕಮಲ ಮಾಡಿದರೂ ಅವರು ಸೋತಿದ್ದಾರೆ. ಬಿಜೆಪಿ ಪಕ್ಷದವರು ಆಪರೇಷನ್ ಕಮಲ ಮಾಡುವಲ್ಲಿ ಸದಾ ಮುಂದೆ. ಯಾವಾಗಲೂ ಹಿಂಬಾಗಿಲಿನಿಂದ ಬರುವುದು ರೂಢಿ ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.