ADVERTISEMENT

‘ಕಲಾವಿದರು ಸಮಾಜ ತಿದ್ದಬೇಕು’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 3:36 IST
Last Updated 24 ನವೆಂಬರ್ 2020, 3:36 IST
ಶಿಡ್ಲಘಟ್ಟದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಂದ್ರಶೇಖರ್ ಮಾತನಾಡಿದರು
ಶಿಡ್ಲಘಟ್ಟದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಂದ್ರಶೇಖರ್ ಮಾತನಾಡಿದರು   

ಶಿಡ್ಲಘಟ್ಟ: ಕಲಾವಿದರು ಸಮಾಜ ತಿದ್ದುವ ಪ್ರಕ್ರಿಯೆಯ ದೊಡ್ಡ ಭಾಗವಾಗಬೇಕು. ನೃತ್ಯ, ಸಂಗೀತ, ನಟನೆ ಕೇವಲ ಅಭಿವ್ಯಕ್ತಿಯಲ್ಲ. ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರಬಲ್ಲ ಶಕ್ತಿಯಿರುವ ಕಲೆಯಿಂದ ಉತ್ತಮ ಸಮಾಜ, ಅಭಿರುಚಿಯುಳ್ಳ ಮನಸ್ಸುಗಳನ್ನು ಸೃಷ್ಟಿಸಲು ಸಾಧ್ಯವಿದೆ ಎಂದು ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಂದ್ರಶೇಖರ್ ತಿಳಿಸಿದರು.

ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಇತ್ತೀಚೆಗೆ ಕರ್ನಾಟಕ ಜನಪರ ವೇದಿಕೆಯ ಸಾಂಸ್ಕೃತಿಕ ಘಟಕದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ, ಸಾಂಸ್ಕೃತಿಕ ನೃತ್ಯ, ಗೀತ ಗಾಯನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಭಾಷಾ ಪ್ರೇಮ, ಕಲೆಯ ಅಭಿರುಚಿಯನ್ನು ಹಿಂದಿನಿಂದಲೂ ಬೆಳೆಸಿಕೊಂಡು ಬರಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಆಡುತ್ತಿದ್ದ ನಾಟಕಗಳು ಈಚೆಗೆ ಕಡಿಮೆಯಾಗಿವೆ. ಕಲೆಯು ದುಡಿವ ಜನರಿಗೆ ಮನರಂಜನೆ ಹಾಗೂ ಉತ್ಸಾಹ ತುಂಬುತ್ತದೆ ಎಂದರು.

ADVERTISEMENT

ನಗರಸಭೆ ಸದಸ್ಯ ಎಂ. ಮುನಿರಾಜು ಮಾತನಾಡಿ, ಸ್ಥಳೀಯ ಕಲಾವಿದರು ಎಳೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ಈಗಿನ ತಾಂತ್ರಿಕ ಯುಗದಲ್ಲಿ ಕಲಿಕೆಗೆ ನೂರಾರು ಮಾರ್ಗಗಳಿವೆ. ಹಾಗೆಯೇ ಕಲಾ ಪ್ರದರ್ಶನಕ್ಕೂ ಹಲವು ಮಾರ್ಗಗಳಿವೆ. ಕಲೆಯನ್ನು ಆಸ್ವಾದಿಸುವ ಮನಸ್ಸುಗಳು ಹೆಚ್ಚಬೇಕು ಎಂದರು.

ಕರ್ನಾಟಕ ಜನಪರ ವೇದಿಕೆ ತಾಲ್ಲೂಕು ಅಧ್ಯಕ್ಷ ರಾಮಾಂಜನೇಯ, ರೈತ ಸಂಘದ ತಾದೂರು ಮಂಜುನಾಥ್, ಬೆಳ್ಳೂಟಿ ಮುನಿಕೆಂಪಣ್ಣ, ಪ್ರತೀಶ್, ನಗರ‌ಸಭೆ ಸದಸ್ಯರಾದ ಅನಿಲ್ ಕುಮಾರ್, ನಾರಾಯಣಸ್ವಾಮಿ, ಕಸಾಪ ಅಧ್ಯಕ್ಷ ಎ.ಎಂ. ತ್ಯಾಗರಾಜು, ರಾಜೇಶ್ವರಿ, ಮುನಿಂದ್ರ, ಮನೋಹರ್, ದೀಪಿಕಾ, ಮುನಿರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.