ಬಾಗೇಪಲ್ಲಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಸಾಹಿತ್ಯ ಪರಿಷತ್ತು, ಕಲಾ ಸಂಘದಿಂದ ಶನಿವಾರ ‘ಹುಣ್ಣಿಮೆ ಹಾಡು’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಕಲಾವಿದರು ಗೀತೆಗಳನ್ನು ಹಾಡಿದರು. ತಾಲ್ಲೂಕಿನ ಕವಿಗಳು ಸ್ವರಚಿತ ಕವನಗಳನ್ನು ವಾಚನ ಮಾಡಿದರು.
ನಿವೃತ್ತ ಶಿಕ್ಷಕರಾದ ಪಿ.ಶಿವಶಂಕರಾಚಾರಿ, ಆಂಜಿನಪ್ಪ, ಶಿಕ್ಷಕ ವೆಂಕಟೇಶ್, ಗಾಯಕಿ ವಿ.ಸುಕನ್ಯಾ, ಡಿ.ಎನ್.ಕೃಷ್ಣಾರೆಡ್ಡಿ, ರಾಮಕೃಷ್ಣಾರೆಡ್ಡಿ ಭಕ್ತಿ, ಜಾನಪದ, ಭಾವಗೀತೆ, ದೇಶಭಕ್ತಿ ಗೀತೆಗಳನ್ನು ಹಾಡಿದರು. ನರಸಿಂಹಮೂರ್ತಿ ಡಿ.ಪಾಳ್ಯ ಅವರು ಕ್ರಾಂತಿ ಹಾಗೂ ಸೌಹಾರ್ದ ಗೀತೆಗಳನ್ನು ಹಾಡಿದರು. ಚಿನ್ನಕೈವಾರಮಯ್ಯ, ಬಾಣಾಲಪಲ್ಲಿ ಶ್ರೀನಿವಾಸ್, ಜಿ.ವಿ.ಚಂದ್ರಶೇಖರ್, ಶ್ರೀನಿವಾಸತಂತ್ರಿ, ಶಿಕ್ಷಕ ಬಾಬಾಜಾನ್, ವಿ.ಸುಕನ್ಯಾ ಅವರು ಸ್ವರಚಿತ ಕವನಗಳನ್ನು ವಾಚಿಸಿದ್ದು, ಹುಣ್ಣಿಮೆ ಹಾಡು ಕಾರ್ಯಕ್ರಮಕ್ಕೆ ಮೆರಗು ತಂದಿತು.
ಈ ವೇಳೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಿನ್ನಕೈವಾರಮಯ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತಿ ಬುಧವಾರದ, ಹುಣ್ಣಿಮೆ ಹಾಗೂ ಅಮಾವಾಸ್ಯೆಯ ಕಾರ್ಯಕ್ರಮಗಳನ್ನು ಪಟ್ಟಣ ವಾರ್ಡ್, ಕಾಲೊನಿ, ಶಾಲಾ, ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗುವುದು. ಈ ಮೂಲಕ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಮಹನೀಯರ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು. ಕನ್ನಡ ಜಾಗೃತಿ ಜತೆಗೆ ಸಮಾಜಮುಖಿಯಾದ ಸ್ವಚ್ಛತೆ, ಬಾಲ್ಯವಿವಾಹ, ವೈಜ್ಞಾನಿಕ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಪ್ರಾಂತ ರೈತ ಸಂಘದ ತಾಲ್ಲೂಕು ಸಂಚಾಲಕ ಡಿ.ಟಿ.ಮುನಿಸ್ವಾಮಿ ಮಾತನಾಡಿ, ಮಕ್ಕಳಿಗೆ ಶಾಲಾ, ಕಾಲೇಜು ಹಾಗೂ ಮನೆಗಳಲ್ಲಿ ವೈಜ್ಞಾನಿಕ ವಿಚಾರಗಳನ್ನು ಬೋಧಿಸಬೇಕು ಎಂದು ತಿಳಿಸಿದರು.
ಡಿ.ಎನ್.ಕೃಷ್ಣಾರೆಡ್ಡಿ, ಮಹಮದ್ ಎಸ್.ನೂರುಲ್ಲಾ, ಆಂಜಿನಪ್ಪ, ವೆಂಕಟರವಣಪ್ಪ, ಈಶ್ವರಪ್ಪ, ಜ್ಯೋತಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.