
ಸಿಗರೇಟು,
ಬಾಗೇಪಲ್ಲಿ: ಪಟ್ಟಣ, ಗ್ರಾಮಗಳ ಚಿಲ್ಲರೆ, ದಿನಸಿ, ಕಾಫಿ, ಟೀ ಮಾರಾಟ ಅಂಗಡಿಗಳಲ್ಲಿ, ಕಳೆದ 3 ತಿಂಗಳಿಂದ ರಾಜಾರೋಷವಾಗಿ ನಕಲಿ ಸಿಗರೇಟು ಹಾವಳಿ ಹೆಚ್ಚಾಗಿದೆ ಎಂದು ಗ್ರಾಹಕರ ಆರೋಪಿಸಿದ್ದಾರೆ.
ಪಟ್ಟಣದ ನ್ಯಾಷನಲ್ ಕಾಲೇಜಿನಿಂದ ಟಿ.ಬಿ.ಕ್ರಾಸ್ವರೆಗೆ ಚಿಲ್ಲರೆ, ಪಾನ್ಬೀಡಾ ಮತ್ತು ದಿನಸಿ ಅಂಗಡಿ ಹೆಚ್ಚಾಗಿವೆ. ಕಳೆದ 3 ತಿಂಗಳಿಂದ ಪಟ್ಟಣದಲ್ಲಿ ನಕಲಿ ಸಿಗರೇಟು ಮಾರಾಟ ಹೆಚ್ಚಾಗಿದೆ. ಹಾಲ್ಮಾರ್ಕ್ ಇಲ್ಲದ ಸಿಗರೇಟು ಮಾರಾಟ ಹೆಚ್ಚಾಗಿದೆ.
ಕೆಲ ಸಗಟು ವ್ಯಾಪಾರಿಗಳು ಸಿಗರೇಟುಗಳ ದಾಸ್ತಾನು ಇಲ್ಲ. ಸಿಗರೇಟುಗಳ ಬೆಲೆ ಹೆಚ್ಚಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ ಎಂದು ಚಿಲ್ಲರೆ ವ್ಯಾಪಾರಿಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಾರೆ. ಚಿಲ್ಲರೆ ಅಂಗಡಿಗಳಲ್ಲಿ ಸಿಗರೇಟಿನ ಮಾರಾಟ ಬೆಲೆ ಹೆಚ್ಚಾಗಿದೆ ಎಂದು ಗ್ರಾಹಕರಿಂದ ದುಪ್ಪಟ್ಟು ಬೆಲೆ ವಸೂಲಿ ಮಾಡಲಾಗುತ್ತಿದೆ.
ಈ ಹಿಂದೆ ದೊಡ್ಡ ಗಾತ್ರದ ಸಿಗರೇಟಿನ ಬೆಲೆ ₹15 ಇತ್ತು. ನಂತರ ₹18 ಆಗಿದೆ. ಚಿಲ್ಲರೆ ಅಂಗಡಿಯವರು ₹2 ಹೆಚ್ಚು ಬೆಲೆ ಪಡೆಯುತ್ತಾರೆ. ಇದೀಗ ಅಂಗಡಿಗಳಲ್ಲಿ ₹25ವರೆಗೆ ಗ್ರಾಹಕರಿಂದ ವಸೂಲಿ ಮಾಡಲಾಗುತ್ತದೆ. ಕೆಲ ಅಂಗಡಿಗಳಲ್ಲಿ ಅಸಲಿ ಸಿಗರೇಟು ಸಿಗುತ್ತಿಲ್ಲ. ನಕಲಿ ಸಿಗರೇಟುಗಳ ಮಾರಾಟದ ಜಾಲವನ್ನು ಸಂಬಂಧಪಟ್ಟ ಆರೋಗ್ಯ, ಪೊಲೀಸ್, ಪುರಸಭೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಹಕರು ಮನವಿ ಮಾಡಿದ್ದಾರೆ.
ಅಸಲಿ ಸಿಗರೇಟು ಅಂಗಡಿಗಳಲ್ಲಿ ಸಿಗುತ್ತಿಲ್ಲ. ನಕಲಿ ಸಿಗರೇಟು ಮಾರಾಟ ಹೆಚ್ಚಾಗಿದೆ. ಸಂಬಂಧಪಟ್ಟ ಕಂಪನಿ, ಅಧಿಕಾರಿಗಳು ನಕಲಿ ಸಿಗರೇಟು ಮಾರಾಟದ ಜಾಲ ಪತ್ತೆ ಹೆಚ್ಚಬೇಕು ಎಂದು ಪಟ್ಟಣದ ನಿವಾಸಿ ಮಂಜುನಾಥ ತಿಳಿಸಿದರು.
ಸಿಗರೇಟು ಸೇವನೆಯಿಂದ ಕ್ಯಾನ್ಸರ್ ರೋಗ ಬರುತ್ತದೆ. ಕಲಬೆರೆಕೆ ತಂಬಾಕು ಸೇವನೆ ಬೇಡ. ನಕಲಿ ಸಿಗರೇಟು ಮಾರಾಟದ ದಂಧೆ ಪತ್ತೆಹಚ್ಚಲು ಹಿರಿಯ ಆರೋಗ್ಯ, ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.