ಬಾಗೇಪಲ್ಲಿ: ‘ಬಾಗೇಪಲ್ಲಿ ತಾಲ್ಲೂಕನ್ನು ‘ಭಾಗ್ಯನಗರ’ ಎಂದು ನಾಮಕರಣ ಮಾಡಬೇಕು. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲ್ಲೂಕು ಅಧ್ಯಕ್ಷ ಬಿಟಿಸಿ ಸೀನಾ ನೇತೃತ್ವದಲ್ಲಿ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಮುಖಂಡರು ಕೆಲ ಕಾಲ ಪ್ರತಿಭಟನೆ ಮಾಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲ್ಲೂಕು ಅಧ್ಯಕ್ಷ ಬಿಟಿಸಿ ಸೀನಾ ಮಾತನಾಡಿ, ‘ಬಾಗೇಪಲ್ಲಿ ಆಂಧ್ರಪ್ರದೇಶದ ಗಡಿಯಲ್ಲಿದ್ದು, ಇಲ್ಲಿ ಆಡುಭಾಷೆ ತೆಲುಗು ಆದರೂ ವ್ಯವಹಾರಿಕವಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಈ ಹಿಂದೆ ಹೈದರಾಬಾದ್–ಕರ್ನಾಟಕದ ಪ್ರಾಂತ್ಯ ಆಗಿರುವ ಸಂದರ್ಭದಲ್ಲಿ ಬಾಗೇಪಲ್ಲಿ ಸೇರಿದಂತೆ ಆಂಧ್ರಪ್ರದೇಶದ ಗಡಿಯಲ್ಲಿನ ಬಹುತೇಕ ಗ್ರಾಮಗಳಿಗೆ ಪಲ್ಲಿ ಎಂದು ಸೇರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಾಗೇಪಲ್ಲಿ ತಾಲ್ಲೂಕು ಇರುವುದರಿಂದ, ಬಾಗೇಪಲ್ಲಿ ತಾಲ್ಲೂಕು ಅನ್ನು ಭಾಗ್ಯನಗರ ತಾಲ್ಲೂಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಅನೇಕ ವರ್ಷಗಳಿಂದ ಕನ್ನಡ ಪರ ಹೋರಾಟಗಾರರು, ಬುದ್ಧಿಜೀವಿಗಳು, ಯುವಜನ ವಿದ್ಯಾರ್ಥಿಗಳು ಭಾಗ್ಯನಗರ ತಾಲ್ಲೂಕು ಮಾಡಲು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಡಿಸೆಂಬರ್ ತಿಂಗಳ ಒಳಗೆ ಭಾಗ್ಯನಗರ ತಾಲ್ಲೂಕು ಎಂದು ಘೋಷಣೆ ಮಾಡದಿದ್ದಲ್ಲಿ, ಬೆಂಗಳೂರಿಗೆ ಪಾದಯಾತ್ರೆ ಮಾಡಲಾಗುವುದು’ ಎಂದು ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಎಂ.ನಾಗರಾಜುರವರಿಗೆ ಮನವಿ ಪತ್ರ ಸ್ವೀಕರಿಸಿದರು. ಕರವೇ ತಾಲ್ಲೂಕು ಪ್ರಧಾನಕಾರ್ಯದರ್ಶಿ ಜಬೀವುಲ್ಲಾ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಲೀಭಾಷ, ಮುಖಂಡರಾದ ವಿ.ಸಾದಪ್ಪ ಎಚ್.ಚಂದ್ರಶೇಖರ್, ಎ.ತಿಮ್ಮಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.