ಬಾಗೇಪಲ್ಲಿ: ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸ್ವಾಮಿಪಲ್ಲಿ ಗ್ರಾಮದಲ್ಲಿ ಮೇ 19 ರಂದು ಸುರಿದ ಮಳೆಯಿಂದ ಮನೆ ಕಳೆದುಕೊಂಡಿದ್ದ ವೃದ್ಧೆ ಜಯಮ್ಮರೆಡ್ಡಿಗೆ ದಾನಿಗಳು ಹೊಸ ಮನೆ ಕಟ್ಟಿಸಿ, ಸೋಮವಾರ ಶಾಸ್ತ್ರೋಸ್ತಕವಾಗಿ ಗೃಹಪ್ರವೇಶ ಮಾಡಿಸಿದರು.
ಮಳೆ ಸುರಿದಾಗ ಜಯಮ್ಮರೆಡ್ಡಿ ಮೇಲೆ ಚಾವಣಿ ಕುಸಿದು ತಲೆ ಹಾಗೂ ಕಾಲಿಗೆ ತೀವ್ರ ಗಾಯ ಆಗಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಮನೆ ಚಾವಣಿ ಕುಸಿತದಿದ್ದರಿಂದ ವಾಸಕ್ಕೆ ಮನೆ ಯೋಗ್ಯವಾಗಿರಲಿಲ್ಲ. ಇದರಿಂದ ಪಕ್ಕದ ಸಣ್ಣ ಶೌಚಾಲಯದ ಕೊಠಡಿಯಲ್ಲಿ ವಾಸವಿದ್ದರು.
ಈ ಬಗ್ಗೆ ಪ್ರಜಾವಾಣಿಯಲ್ಲಿ ಸುದ್ದಿ ಪ್ರಕಟವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಗಮನಿಸಿದ ದಾನಿಗಳಾದ ಚಿನ್ನಕಾಯಲಪಲ್ಲಿಪ್ರಶಾಂತ್ಕುಮಾರ್, ಗಣೇಶರೆಡ್ಡಿ ಪುರಸಭೆ ಸದಸ್ಯ ಬಿ.ಎ.ನರಸಿಂಹಮೂರ್ತಿ, ವೆಂಕಟೇಶ್, ಅಪ್ಪಯ್ಯಬಾಬು, ಕೊಂಡರೆಡ್ಡಿಪಲ್ಲಿಸದಾಶಿವಾರೆಡ್ಡಿ, ಆರ್.ಪ್ರತಾಪ್, ವೀರ, ರಾಮಸ್ವಾಮಿಪಲ್ಲಿಯ ವಿನೋದ್ಕುಮಾರ್, ಎಚ್.ಶ್ರೀನಿವಾಸ್, ಗಿರೀಶಬಾಬು, ಬೆಸ್ಕಾಂನ ಸುಕುಮಾರ್, ಪುರಸಭೆ ಅಧಿಕಾರಿ ಅಥಾವುಲ್ಲಾ, ಗ್ರೀನ್ ಇಂಡಿಯಾ ಪೋರಂ ಅಧ್ಯಕ್ಷ ಸೈಯ್ಯದ್ಸಿದ್ದಿಕ್, ವೆಂಕಟೇಶ್, ಸಲ್ಮಾನ್, ಸುಬ್ಬು ಅವರು ಮನೆ ಕಟ್ಟಲು ನೆರವಾಗಿದ್ದರು. ಸಿಮೆಂಟ್, ಇಟ್ಟಿಗೆ, ಕಲ್ಲು, ಶೀಟು ಮತ್ತು ಧನ ಸಹಾಯ ಮಾಡಿದ್ದಾರೆ.
ದಾನಿಗಳ ಸಮ್ಮುಖದಲ್ಲಿ ಸೋಮವಾರ ನೂತನ ಮನೆಯ ಗೃಹಪ್ರವೇಶ ನಡೆಯಿತು. ಸಣ್ಣ ಕೊಠಡಿಯ ಶೌಚಾಲಯದಲ್ಲಿದ್ದ ಗೃಹಪಯೋಗಿ ವಸ್ತುಗಳನ್ನು ವೃದ್ಧೆ ಜಯಮ್ಮರೆಡ್ಡಿ ಹಾಗೂ ದಾನಿಗಳು ನೂತನ ಮನೆಗೆ ಸಾಗಿಸಲಾಯಿತು.
ಜಯಮ್ಮರೆಡ್ಡಿಗೆ ಮನೆ ನಿರ್ಮಿಸಲು ಆಡಳಿತ ಸಭೆಯಲ್ಲಿ ಅನುಮೋದನೆ ಪಡೆದು, ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಮನೆಗೆ ಅನುದಾನ ಬಂದ ಕೂಡಲೇ ಮನೆ ನಿರ್ಮಿಸಿಕೊಡಲಾಗುವುದು. ದಾನಿಗಳು ನಿರ್ಮಿಸಿದ ಮನೆ ವೃದ್ಧೆ ಜಯಮ್ಮರೆಡ್ಡಿಗೆ ಆಸರೆ ಆಗಿದೆ ಎಂದು ಪರಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗಮಣಿ ತಿಳಿಸಿದರು.
ಜಯಮ್ಮರೆಡ್ಡಿರವರಿಗೆ ಮನೆ ಇಲ್ಲದೇ, ಶೌಚಾಲಯದ ಸಣ್ಣ ಕೊಠಡಿಯಲ್ಲಿ ವಾಸ ಮಾಡುತ್ತಿರುವುದು ನೋವು ತಂದಿತು. ಸ್ನೇಹಿತರ, ದಾನಿಗಳ ಸಹಕಾರದಿಂದ ಇದೀಗ ನೂತನ ಮನೆ ನಿರ್ಮಿಸಲಾಗಿದೆ. ಸರ್ಕಾರ ಕೂಡಲೇ ವೃದ್ದೆ ಜಯಮ್ಮರೆಡ್ಡಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಪುರಸಭೆ ಸದಸ್ಯ ಬಿ.ಎ.ನರಸಿಂಹಮೂರ್ತಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.