
ಸಾಂದರ್ಭಿಕ ಚಿತ್ರ
ಬಾಗೇಪಲ್ಲಿಯ ಬಾಲಕರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬೇಸಿಗೆಯಲ್ಲಿ ಪಕ್ಷಿಗಳ ದಾಹ, ಹಸಿವು ತಣಿಸಲು ಶಾಲೆಯ ಆವರಣದಲ್ಲಿ ಗಿಡ, ಮರಗಳಿಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಕಟ್ಟಿ ನೀರು, ಧಾನ್ಯ ಇಡುತ್ತಿದ್ದಾರೆ.
ಮಾರ್ಚ್ ಮಧ್ಯಕ್ಕೆ ತಾಪಮಾನ 38 ಡಿಗ್ರಿ ಸೆಲ್ಸಿಯಷ್ ತಲುಪಿದೆ. ಬಿಸಿಲಿನ ತಾಪದಿಂದ ಬಳಲಿ ನೀರು ಅರಿಸಿಕೊಂಡು ಶಾಲಾ ಆವರಣಕ್ಕೆ ಬರುವ ಪಕ್ಷಿಗಳು ನೀರಿಲ್ಲದೆ ಪರಿತಪಿಸುತ್ತಿವೆ.
ಇದನ್ನು ಕಂಡ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಕೀರ್ತಿ ಬಸಪ್ಪ ಲಗಳಿ ಹಾಗೂ ವಿದ್ಯಾರ್ಥಿಗಳೊಂದಿಗೆ ಪಕ್ಷಿಗಳ ಬಾಯಾರಿಕೆ, ಹಸಿವು ನೀಗಿಸಲು ಏನಾದರೂ ಮಾಡಲು ಯೋಚಿಸಿದ್ದಾರೆ. ಊರಲ್ಲಿ ಮನೆ, ಮನೆ ತಿರುಗಿ ಪ್ಲಾಸ್ಟಿಕ್ ಬಾಟಲಿ ಸಂಗ್ರಹಿಸಿದ್ದಾರೆ. ವಿಶ್ವ ಗುಬ್ಬಚ್ಚಿಗಳ ದಿನದಂದು ಶಾಲಾ ವರಣದ ಗಿಡ, ಮರಗಳಿಗೆ 50ಕ್ಕೂ ಹೆಚ್ಚು ಬಾಟಲಿ ಕತ್ತರಿಸಿ ಕಟ್ಟಿಸಿದ್ದಾರೆ.
ಅದರಲ್ಲಿ ನೀರು ಮತ್ತು ಧಾನ್ಯ ಹಾಕಿಡುತ್ತಾರೆ. ಬಾಯಾರಿದ ಗುಬ್ಬಚ್ಚಿಗಳು, ಕಾಗೆ, ಪಾರಿವಾಳ ಸೇರಿದಂತೆ ವಿವಿಧ ಪಕ್ಷಿಗಳು ಇಲ್ಲಿಗೆ ನೀರು ಹುಡುಕಿಕೊಂಡು ಬರುತ್ತಿವೆ. ಮಕ್ಕಳ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಈಗ ಶಾಲೆಯ ಆವರಣದಲ್ಲಿ ಪಕ್ಷಿಗಳ ಕಲರವ ಹೆಚ್ಚಾಗಿದೆ ಎನ್ನುತ್ತಾರೆ ಶಿಕ್ಷಕಿ ಕೀರ್ತಿ ಲಗಳಿ. ಬಿಸಿಲಿನ ತಾಪ ಹೆಚ್ಚಾಗಿದೆ. ಪಕ್ಷಿಗಳಿಗೆ ಆಹಾರ, ನೀರು ಸಿಗದೆ ನರಳುತ್ತಿವೆ. ಮನೆ, ಶಾಲೆ, ಸರ್ಕಾರಿ ಕಚೇರಿ, ಖಾಲಿ ನಿವೇಶನಗಳಲ್ಲಿ ಪ್ರಾಣಿಗಳಿಗೆ ನೀರು ಇಡುವ ಮೂಲಕ ಗುಬ್ಬಚ್ಚಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಲಿ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.