ADVERTISEMENT

ಬಾಗೇಪಲ್ಲಿ: ನಿರ್ವಹಣೆ ಇಲ್ಲದ ಪ್ರಯಾಣಿಕರ ತಂಗುದಾಣಗಳು: ಅಧಿಕಾರಿಗಳ ನಿರ್ಲಕ್ಷ್ಯ

ಬಾಗೇಪಲ್ಲಿ: ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 3:12 IST
Last Updated 3 ನವೆಂಬರ್ 2025, 3:12 IST
ಬಾಗೇಪಲ್ಲಿ ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮದ ಕ್ರಾಸ್‍ನಲ್ಲಿನ ಪ್ರಯಾಣಿಕರ ತಂಗುದಾಣಕ್ಕೆ ಜನರು ಕಾಲುವೆ ದಾಟಿ ಹೋಗಬೇಕಿದೆ 
ಬಾಗೇಪಲ್ಲಿ ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮದ ಕ್ರಾಸ್‍ನಲ್ಲಿನ ಪ್ರಯಾಣಿಕರ ತಂಗುದಾಣಕ್ಕೆ ಜನರು ಕಾಲುವೆ ದಾಟಿ ಹೋಗಬೇಕಿದೆ    

ಬಾಗೇಪಲ್ಲಿ: ದೂರದ ಊರುಗಳಿಗೆ ಪ್ರಯಾಣಿಸುವ ಜನರು ವಿಶ್ರಾಂತಿ ಪಡೆಯಲು ತಾಲ್ಲೂಕಿನ ಗ್ರಾಮಗಳ ಕ್ರಾಸ್‍ಗಳಲ್ಲಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣಗಳು, ಪ್ರಯಾಣಿಕರ ಬಳಕೆಗೆ ಬರದೇ ಸಿನಿಮಾ ಪೋಸ್ಟರ್‌ಗಳಿಗೆ, ಅನೈತಿಕ ಚಟುವಟಿಕೆಗಳ ತಾಣವಾಗಿವೆ.

ತಾಲ್ಲೂಕಿನಲ್ಲಿ ಕಸಬಾ, ಮಿಟ್ಟೇಮರಿ, ಗೂಳೂರು, ಪಾತಪಾಳ್ಯ ವ್ಯಾಪ್ತಿಯಲ್ಲಿ 16 ಗ್ರಾಮ ಪಂಚಾಯಿತಿ ಇವೆ. ಬಹುತೇಕ ತಾಂಡಗಳು ಸೇರಿದಂತೆ 300ಕ್ಕೂ ಹೆಚ್ಚು ಗ್ರಾಮಗಳು ಇವೆ. ತಾಲ್ಲೂಕಿನ ಕೊತ್ತಕೋಟೆ, ಮಾರ್ಗಾನುಕುಂಟೆ, ಬಿಳ್ಳೂರು, ಸೇರಿದಂತೆ ಕೆಲ ಗ್ರಾಮ ಪಂಚಾಯಿತಿಗಳ ಗ್ರಾಮಗಳು ನೆರೆಯ ಆಂಧ್ರಪ್ರದೇಶದ ಗಡಿಯ ಅಂಚಿನಲ್ಲಿ ಇವೆ.

ಗ್ರಾಮಗಳಿಂದ ಕ್ರಾಸ್‍ಗಳಿಗೆ ಜನರು ಕಾಲುದಾರಿಯಲ್ಲಿ ನಡೆಯಬೇಕು. ಕ್ರಾಸ್‍ಗಳಲ್ಲಿ ಬಸ್‍ಗಳ ಆಗಮನಕ್ಕೆ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಕೆಲವು ಕಡೆ ಸರ್ಕಾರ ಲಕ್ಷಾಂತರ ಹಣ ಬಿಡುಗಡೆ ಮಾಡಿ ತಂಗುದಾಣಗಳನ್ನು ನಿರ್ಮಿಸಿದೆ.

ADVERTISEMENT

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣಗಳು ಇದೀಗ ಜನರ ಬಳಕೆಗೆ ಬರುತ್ತಿಲ್ಲ. ಸ್ವಚ್ಛತೆ ಹಾಗೂ ಸೂಕ್ತ ನಿರ್ವಹಣೆ ಇಲ್ಲ. ಕೂರುವ ಬಂಡೆಗಳು, ತಂಗುದಾಣದ ಆವರಣ ಕಸ, ಕಡ್ಡಿ, ತ್ಯಾಜ್ಯದಿಂದ ಕೂಡಿವೆ. ಬೀಡಿ, ಸಿಗರೇಟುಗಳು, ಪ್ಲಾಸ್ಟಿಕ್ ಕವರ್‌, ಹಾಳೆಗಳು ರಾಶಿಗಟ್ಟಲೇ ಇವೆ. ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಕೆಲವರು ರಾತ್ರಿ ಸಮಯದಲ್ಲಿ ಪ್ರಯಾಣಿಕರ ತಂಗುದಾಣಗಳಲ್ಲಿ ಮದ್ಯ ಸೇವಿಸುವುದು, ಅನೈತಿಕ ಚಟುವಟಿಕೆಗಳ ತಾಣವಾಗಿವೆ. ನಿರ್ಗತಿಕರು ಹಳೆ ಬಟ್ಟೆಗಳು, ಪಾತ್ರೆಗಳು ಇಟ್ಟುಕೊಂಡು ವಾಸ ಮಾಡುತ್ತಿದ್ದಾರೆ.

ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮದ ಕ್ರಾಸ್‍ನ ತಂಗುದಾಣವು ಕಾಲುವೆ ಪಕ್ಕದಲ್ಲಿ ನಿರ್ಮಿಸಲಾಗಿದೆ. ಕಾಲುವೆ ದಾಟಲು ಪ್ರಯಾಣಿಕರಿಗೆ ಆಗುವುದಿಲ್ಲ. ರಾಯದುರ್ಗಂಪಲ್ಲಿ, ಪೋತೇಪಲ್ಲಿ, ಚಿನ್ನೇಪಲ್ಲಿ ಕ್ರಾಸ್, ಕಾರಕೂರು ಕ್ರಾಸ್ ಸೇರಿದಂತೆ ರಸ್ತೆಗಳ ಪಕ್ಕದಲ್ಲಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣಗಳಲ್ಲಿ ಸ್ಚಚ್ಛತೆ ಇಲ್ಲ. ತಂಗುದಾಣಗಳ ಒಳಗೆ, ಹೊರಗೆ, ಸುತ್ತಮುತ್ತಲೂ ಕಳೆ, ಮುಳ್ಳಿನ ಗಿಡಗಳು ಬೆಳೆದಿವೆ. ಪ್ರಯಾಣಿಕರು ಕಲ್ಲು, ಮುಳ್ಳು ದಾಟಿಕೊಂಡು ತಂಗುದಾಣಗಳಿಗೆ ಹೋಗಬೇಕಾಗಿದೆ. ಕೂರುವ ಬಂಡೆಗಳ ಕಳೆ, ದೂಳು ಇರುವುದರಿಂದ ಪ್ರಯಾಣಿಕರು ಕೂರಲು ಆಗುವುದಿಲ್ಲ.

ತಾಲ್ಲೂಕಿನ ಐತಿಹಾಸಿಕ ದೇವರಗುಡಿಪಲ್ಲಿ (ಗಡಿದಂ) ಗ್ರಾಮದ ಕ್ರಾಸ್‌ನಲ್ಲಿ ತಂಗುದಾಣದಲ್ಲಿ ಸ್ವಚ್ಛತೆ ಇಲ್ಲ. ಕೂರಲು ಜಾಗ ಇಲ್ಲ. ಪ್ರಯಾಣಿಕರು, ಮಕ್ಕಳು, ಮಹಿಳೆಯರು, ವೃದ್ಧರು ಗಂಟೆಗಟ್ಟಲೇ ನಿಂತುಕೊಂಡೇ ಇರಬೇಕಾಗಿದೆ. ತಂಗುದಾಣಗಳ ಗೋಡೆಗಳ ಮೇಲೆ ಚಲನಚಿತ್ರಗಳ ಪೋಸ್ಟರ್‌ ಬಳಕೆಗೆ ಮಾತ್ರ ಸೀಮಿತ ಆಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ತಂಗುದಾಣಗಳು ಗುತ್ತಿಗೆದಾರರ, ಅಧಿಕಾರಿಗಳ, ಜನಪ್ರತಿನಿಧಿಗಳ ಕಮಿಷನ್‍ಗಳಿಗೆ ಮಾತ್ರ ಸೀಮಿತ ಆಗಿದೆಯೇ ಹೊರತು, ಗ್ರಾಮಸ್ಥರು ಬಳಕೆ ಮಾತ್ರ ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ನಲ್ಲಪರೆಡ್ಡಿಪಲ್ಲಿ ಗ್ರಾಮದ ಬಳಿ ನಿರ್ಮಿಸಿದ ತಂಗುದಾಣಕ್ಕೆ ಪ್ರಯಾಣಿಕರು ಸಂಚರಿಸಲು ಕಾಲುವೆ ದಾಟಬೇಕು. ಹೀಗಾಗಿ ಪ್ರಯಾಣಿಕರು ರಸ್ತೆಯ ಪಕ್ಕದಲ್ಲಿ ಚಳಿ, ಗಾಳಿ, ಬಿಲಿಲಿಗೆ ಗಂಟೆಗಟ್ಟಲೆ ಕಾಯಬೇಕು. ಪ್ರಯಾಣಿಕರ ಬಳಕೆಗೆ ಮಾಡಲು ಸಾಧ್ಯವಾಗುವಂತೆ ತಂಗುದಾಣವನ್ನು ಮಾಡಬೇಕು ಎಂದು ನಲ್ಲಪರೆಡ್ಡಿಪಲ್ಲಿಯ ಅಶ್ವತ್ಥರೆಡ್ಡಿ ಒತ್ತಾಯಿಸಿದರು.

ಇಂದಿಗೂ ತಾಲ್ಲೂಕಿನ ಸಿದ್ದನಪಲ್ಲಿ, ಬೂರಗಮಡು, ಪೆದ್ದತಾಂಡ ಸೇರಿದಂತೆ ಬಹುತೇಕ ತಾಂಡಗಳು ಸೇರಿದಂತೆ ಗ್ರಾಮಗಳಿಗೆ ಸಾರಿಗೆ ಬಸ್ ಸೌಲಭ್ಯ ಇಲ್ಲ. ಇಂದಿಗೂ ನಮ್ಮೂರಿಗೆ, ತಾಂಡಾಗೆ ಸಾರಿಗೆ ಬಸ್ ಸಂಚರಿಸಿಲ್ಲ. ನನಗೀಗ 95 ವರ್ಷ. ಇದುವರೆಗೂ ಸಾರಿಗೆ ಬಸ್ ಸಂಚಾರ ನೋಡಿಲ್ಲ ಎಂದು ತಾಂಡದ ಪೀರೇನಾಯಕ ತಿಳಿಸಿದರು. 

ಲಕ್ಷಾಂತರ ರೂಪಾಯಿಗಳಲ್ಲಿ ನೂತನವಾಗಿ ನಿರ್ಮಿಸಿದ ತಂಗುದಾಣ ಬಳಕೆ ಬರುತ್ತಿಲ್ಲ. ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ಕೇವಲ ಮುಖಂಡರ, ಗುತ್ತಿಗೆದಾರರ, ಅಧಿಕಾರಿಗಳ, ಜನಪ್ರತಿನಿಧಿಗಳಿಗೆ ಕಮಿಷನ್‍ಗಳಿಗೆ ತಂಗುದಾಣಗಳು ಮಾಡಿದ್ದಾರೆ ವಿನಾಃ ಪ್ರಯಾಣಿಕರ ಅನುಕೂಲಕ್ಕೆ ಮಾಡಿಲ್ಲ. ಜಿಲ್ಲಾ ಪಂಚಾಯಿತಿ ತಾಂತ್ರಿಕ ವಿಭಾಗದ ಅಧಿಕಾರಿಗಳು ಗಮನ ಹರಿಸಿ ತಂಗುದಾಣಗಳನ್ನು ಪ್ರಯಾಣಿಕರ ಬಳಕೆಗೆ ಬರುವಂತೆ ಸೂಕ್ತ ನಿರ್ವಹಣೆ ಮಾಡಬೇಕು ಎಂದು ದಲಿತ ಹಕ್ಕುಗಳ ಸಮಿತಿಯ ಬಿಳ್ಳೂರುನಾಗರಾಜ್ ಒತ್ತಾಯಿಸಿದರು.

ಪಾತಪಾಳ್ಯ, ಚೇಳೂರು, ಚಿಂತಾಮಣಿ ಕಡೆಗಳಿಗೆ ಸಂಚರಿಸುವ ವೃತ್ತವು ಕಾರಕೂರು ಕ್ರಾಸ್ ಆಗಿದೆ. ಗ್ರಾಮಗಳ ಜನರು ದೂರದಿಂದ ಬಾಗೇಪಲ್ಲಿಗೆ, ವಿವಿಧ ಕಡೆಗಳಿಗೆ ಸಂಚರಿಸಲು ಪ್ರಯಾಣಿಕರು ಬರುತ್ತಾರೆ. ಆದರೆ ಹಳೆ ತಂಗುದಾಣದಲ್ಲಿ ಸ್ವಚ್ಛತೆ ಇಲ್ಲ. ಕೂರಲು ಆಗುವುದಿಲ್ಲ. ಕೂಡಲೇ ತಂಗುದಾಣವನ್ನು ಸ್ವಚ್ಛತೆ ಮಾಡಿಸಿ, ಜನರು ಕೂರಲು ಅವಕಾಶ ಮಾಡಬೇಕು ಎಂದು ಗೃಹಿಣಿ ಮಂಜುಳ ಆಗ್ರಹಿಸಿದರು. 

ರಾಯಂಗುರ್ಗಂಪಲ್ಲಿ ಕ್ರಾಸ್‍ನಲ್ಲಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಶಿಥಿಲಾವಸ್ಥೆಯಲ್ಲಿದೆ
ಉಗಲನಾಗೇಪಲ್ಲಿ ಗುಂಡ್ಲಪಲ್ಲಿ ಕ್ರಾಸ್ ರಸ್ತೆಬದಿಯಲ್ಲಿ ನಿರ್ಮಿಸಿದ ತಂಗುದಾಣದ ಮುಂದೆ ಕಳೆ ಮುಳ್ಳಿನ ಗಿಡ ಬೆಳೆದಿದೆ
ಗಡಿದಂನ ಕ್ರಾಸ್‍ನಲ್ಲಿನ ಪ್ರಯಾಣಿಕರ ತಂಗುದಾಣದಲ್ಲಿ ಕಸ ಕಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.