ಬಾಗೇಪಲ್ಲಿ: ತಾಲ್ಲೂಕಿನ ಗೂಳೂರಿನ ಟಿಎಪಿಸಿಎಂಎಸ್ ಹಾಗೂ ಖಾಸಗಿ ರಸಗೊಬ್ಬರ ವಿತರಣೆ ಅಂಗಡಿಗಳಿಗೆ ಕೃಷಿ ಇಲಾಖೆ ಚಿಂತಾಮಣಿ ಉಪವಿಭಾಗದ ಉಪ ನಿರ್ದೇಶಕಿ ಭವ್ಯಾರಾಣಿ, ತಾಲ್ಲೂಕು ಸಹಾಯಕ ನಿರ್ದೇಕ ಶ್ರೀನಿವಾಸ್ ಶನಿವಾರ ಭೇಟಿ ನೀಡಿ ರಸಗೊಬ್ಬರ ಅಗತ್ಯತೆ ಹಾಗೂ ರೈತರಿಂದ ಮಾಹಿತಿ ಪಡೆದರು.
ರಸಗೊಬ್ಬರ ದಾಸ್ತಾನು, ವಿತರಣೆ ಮಾಡಿರುವ ಪಟ್ಟಿಯನ್ನು ಅಂಗಡಿ ಮಾಲೀಕರಿಂದ, ಸೊಸೈಟಿ ಅಧಿಕಾರಿಗಳಿಂದ ಪಡೆದರು. ರಸಗೊಬ್ಬರ ಮಾರಾಟದ ಪಟ್ಟಿಯನ್ನು ಪ್ರಕಟ ಮಾಡಬೇಕು. ರೈತರಿಗೆ ಕೊರತೆ ಆಗದಂತೆ ರಸಗೊಬ್ಬರದ ಮೂಟೆಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲಿ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಯೂರಿಯಾ ಮೂಟೆಗಳನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ. ರೈತರು ಮೂಟೆ ಖರೀದಿಗೆ ಬೆಳಗಿನ ಜಾವದಿಂದಲೇ ಸರತಿಸಾಲಿನಲ್ಲಿ ನಿಲ್ಲಬೇಕು. ಕುಡಿಯುವ ನೀರು, ತಿಂಡಿ ಇಲ್ಲದೇ ಗಂಟೆಗಟ್ಟಲೆ ಕಾಯಬೇಕು. ರೈತರಿಗೆ ಅಗತ್ಯ ಇರುವಷ್ಟು ಯೂರಿಯಾ ಮೂಟೆಳು ಸಿಗುತ್ತಿಲ್ಲ ಎಂದು ರೈತರು, ರೈತಪರ ಸಂಘಟನೆಗಳ ಮುಖಂಡರು ಅಳಲು ತೋಡಿಕೊಂಡರು.
ಭವ್ಯಾರಾಣಿ ಪ್ರತಿಕ್ರಿಯಿಸಿ, ‘ಕೆಲ ಕಡೆ ಮಳೆ ಆಗಿದೆ. ಬಾಗೇಪಲ್ಲಿ ತಾಲ್ಲೂಕಿಗೆ 140 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ಇದೆ. ಎಕರೆಗೆ ಒಂದು ಮೂಟೆ ಯೂರಿಯಾ ಹಾಕಿದರೆ ಸಾಕು. ರೈತರಿಗೆ ಎಷ್ಟೇ ಜಗೃತಿ ಮೂಡಿಸಿದರೂ ಹೆಚ್ಚು ಯೂರಿಯಾ ಹಾಕುತ್ತಿದ್ದಾರೆ. ಇದರಿಂದ ಉತ್ತಮ ಇಳುವರಿ ಬರುವುದಿಲ್ಲ. ರೈತರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ. ಹೆಚ್ಚಿನ ಮಾಹಿತಿಗೆ ಅಧಿಕಾರಿಗಳ ಬಳಿ ಬಳಕೆ ಮಾಡುವ ವಿಧಾನದ ಬಗ್ಗೆ ಜಾಗೃತಿ ಪಡೆದುಕೊಳ್ಳಬೇಕು’ ಎಂದರು.
ಶ್ರೀನಿವಾಸ್ ಮಾತನಾಡಿ, ಬೆಳೆಗಳಿಗೆ ಹೆಚ್ಚಾಗಿ ಯೂರಿಯಾ ಸಿಂಪಡಣೆ ಮಾಡಬಾರದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.