ಶಿಡ್ಲಘಟ್ಟ: ತ್ಯಾಗ ಮತ್ತು ಬಲಿದಾನದ ಸಂಕೇತ ಈದ್ ಉಲ್ ಅಝ್ ಹಾ (ಬಕ್ರೀದ್) ಹಬ್ಬವನ್ನು ಸೋಮವಾರ ಸಹಸ್ರಾರು ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಶನಿವಾರ ಆಚರಿಸಿದರು.
ಸಂಪ್ರದಾಯದಂತೆ ಜಾಮಿಯಾ ಮಸೀದಿ ಬಳಿ ಜಮಾಯಿಸಿದ ಮುಸ್ಲಿಮರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಜಾಮಿಯಾ ಮಸೀದಿ ಧರ್ಮಗುರು ಹಝರತ್ ಮೌಲಾನಾ ಗುಲಾಂ ಜೀಲಾನಿ ಅವರು ಬಕ್ರೀದ್ ಹಬ್ಬದ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಮರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಪೂರ್ವಜರ ಸಮಾಧಿಗಳ ಬಳಿ ತೆರಳಿ ಪುಷ್ಪನಮನ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ಸಲ್ಲಿಸಿದ ಹಝರತ್ ಇಸ್ಮಾಯಿಲ್ ಝಬೀಉಲ್ಲಾ ಅವರ ಸ್ಮರಣಾರ್ಥವಾಗಿ ಮೇಕೆ, ಕುರಿಗಳನ್ನು ಬಲಿ ನೀಡಿ ಮೂರು ಭಾಗಗಳಾಗಿ ವಿಂಗಡಿಸಿ ಮಾಂಸವನ್ನು ಹಂಚಿದರು.
ಶಾಸಕ ಬಿ.ಎನ್.ರವಿಕುಮಾರ್ ಅವರು ಈದ್ಗಾ ಮೈದಾನಕ್ಕೆ ಬಂದು ಮುಸ್ಲಿಮರಿಗೆ ಹಬ್ಬದ ಶುಭಾಶಯ ಕೋರಿದರು. ಜಾಮಿಯಾ ಮಸೀದಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಶ್ರೀನಿವಾಸ್ ನೇತೃತ್ವದಲ್ಲಿ ವೇಣುಗೋಪಾಲ್, ಶ್ಯಾಮಲಾ ಮತ್ತು ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.