ಶಿಡ್ಲಘಟ್ಟ: ಹೆಣ್ಣು ಕುಟುಂಬದ ಕಣ್ಣಿದ್ದಂತೆ. ಕುಟುಂಬದ ಎಲ್ಲ ಸದಸ್ಯರು ಸರಿದಾರಿಯಲ್ಲಿ ಸಾಗಿ, ಇತರರಿಗೆ ಮಾದರಿಯಾದ ಬದುಕು ನಡೆಸುವಲ್ಲಿ ಮಹಿಳೆಯರ ಮಾರ್ಗದರ್ಶನ ಮುಖ್ಯ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಪ್ರಕೃತಿ ಮಹಿಳಾ ಬ್ಯುಟೀಷಿಯನ್ ಹಾಗೂ ಟೈಲರ್ಸ್ ಕೌಶಲಾಭಿವೃದ್ಧಿ ಸೇವಾ ಸಂಸ್ಥೆಯ ಉದ್ಘಾಟಿಸಿ ಮಾತನಾಡಿದರು.
ಕೊರೊನಾದಂತ ಕಠಿಣ ಪರಿಸ್ಥಿತಿಯಲ್ಲೂ ಗ್ರಾಮೀಣ ಭಾಗದ ಅನೇಕರು ಹೈನುಗಾರಿಕೆ, ಕುರಿ ಮೇಕೆ ಸಾಕಣೆಯಿಂದ ಕುಟುಂಬವನ್ನು ಪೋಷಿಸಿ ಸೈ ಎನಿಸಿಕೊಂಡಿದ್ದಾರೆ. ಟೈಲರಿಂಗ್, ಬ್ಯುಟೀಷಿಯನ್ನಂತ ಸ್ವಯಂ ಉದ್ಯೋಗದಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂತಹ ಹೆಣ್ಣುಮಕ್ಕಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಕೆಲಸವನ್ನು ಎರಡು ತಿಂಗಳೊಳಗೆ ಮಾಡಲಿದ್ದೇನೆ ಎಂದು ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, ಯಾರು ಬ್ಯುಟೀಷಿಯನ್ ಕೋರ್ಸ್ನ ತರಬೇತಿ ಪಡೆಯಲು ಇಚ್ಚಿಸುತ್ತಿರೋ ಅವರೆಲ್ಲರೂ ಬ್ಯಾಂಕ್ನಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ, ಎಲ್ಲರಿಗೂ ಉಚಿತ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು. ಸಂಘದ ಎಲ್ಲ ಸದಸ್ಯರಿಗೂ ಹೊಲಿಗೆ ಯಂತ್ರಗಳನ್ನು ಬ್ಯಾಂಕಿನಿಂದ ಉಚಿತ ವಿತರಣೆ ಮಾಡುವ ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾಲ್ಫಿನ್ ನಾಗರಾಜ್ ಮಾತನಾಡಿ, ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು ಕಾರ್ಖಾನೆಯನ್ನು ಆರಂಭಿಸಲು ಶಾಸಕ ವಿ.ಮುನಿಯಪ್ಪ ಅವರು ನಿರ್ಧರಿಸಿದ್ದು ಶೀಘ್ರದಲ್ಲೆ ಆ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.
ನಗರಸಭಾ ಸದಸ್ಯೆ ಚೈತ್ರಾ ಮನೋಹರ್, ಮಹಿಳಾ ಹೋರಾಟಗಾರ್ತಿ ಕವಿತಾರೆಡ್ಡಿ, ಪ್ರಕೃತಿ ಮಹಿಳಾ ಬ್ಯುಟೀಷಿಯನ್ ಸಂಘದ ಅಧ್ಯಕ್ಷೆ ಎಸ್.ರಾಧ, ಕಾರ್ಯದರ್ಶಿ ಶೈಲಾ, ಗೌರವಾಧ್ಯಕ್ಷೆ ಭಾಗ್ಯಮ್ಮ, ಖಜಾಂಚಿ ರೇಖಾ, ವೆಂಕಟಲಕ್ಷ್ಮಮ್ಮ, ಶಾರದಾ, ವರಲಕ್ಷ್ಮಮ್ಮ, ಮುನೀಂದ್ರ, ಮಂಜುಳಮ್ಮ, ಮಧುಲತಾ, ಯಾಸ್ಮೀನ್ ತಾಜ್, ಗಾಯಿತ್ರಿ, ಪುಷ್ಪ ಅಮರನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.