
ಶಿಡ್ಲಘಟ್ಟ: ಆಸ್ಪತ್ರೆಯ ಜೈವಿಕ ತ್ಯಾಜ್ಯವನ್ನು ನಿಯಮದಂತೆ ವಿಲೇವಾರಿ ಮಾದಡೆ ನಗರದ ಗೌಡನ ಕೆರೆ ಅಂಗಳದಲ್ಲಿ ಸುರಿಯಲಾಗುತ್ತಿದ್ದು, ಮಾಲಿನ್ಯ ಉಂಟಾಗುತ್ತಿದೆ.
ಕೆರೆ ಅಂಗಳದಲ್ಲಿ ಆಸ್ಪತ್ರೆ ತ್ಯಾಜ್ಯ ಕಂಡ ಸ್ಥಳೀಯರು ಆತಂಕಕ್ಕೆ ಒಳಾಗಿದ್ದಾರೆ. ತ್ಯಾಜ್ಯದಲ್ಲಿ ವ್ಯಾಪಕವಾಗಿ ಸಿರಂಜ್ ಮತ್ತು ಸೂಜಿಗಳಿಗೆ. ಯಾವ ರೋಗಿಗೆ, ಯಾವ ಔಷಧಿ ಬಳಸದ ತ್ಯಾಜ್ಯವೋ ಇದು. ಇದರಿಂದ ಕಾಯಿಲೆ ಹರಡಬಹುದೇ ಎಂಬ ಭೀತಿ ಸ್ಥಳೀಯರಲ್ಲಿ ಮನೆ ಮಾಡಿದೆ.
ನಗರದ ಆಗ್ನೇಯ ದಿಕ್ಕಿನಲ್ಲಿರುವ ಗೌಡನ ಕೆರೆಗೆ ಐದು ಶತಮಾನಗಳ ಇತಿಹಾಸವಿದೆ. ಶಿಡ್ಲಘಟ್ಟ ನಗರದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಈ ಕೆರೆಯನ್ನು ಕಟ್ಟಿಸಿದ್ದರಿಂದಾಗಿ ಇದಕ್ಕೆ ಗೌಡನ ಕೆರೆ ಎಂಬ ಹೆಸರು ಬಂತೆಂದು ದಾಖಲಾಗಿದೆ.
ಇತಿಹಾಸ ಪ್ರಸಿದ್ಧ ಗೌಡನ ಕೆರೆ ಈಗ ಒತ್ತುವರಿಗೆ ಈಡಾಗಿ ತನ್ನ ವಿಸ್ತೀರ್ಣವನ್ನು ಕಳೆದುಕೊಳ್ಳುತ್ತಿದೆ. ಇದೀಗೆ ನಿಸರ್ಗಕ್ಕೆ ಹಾನಿಕಾರಕವಾದ ಆಸ್ಪತ್ರೆ(ಜೈವಿಕ) ತ್ಯಾಜ್ಯದ ರಾಶಿ ಸುರಿಯಲಾಗುತ್ತಿದೆ. ಅತ್ಯಂತ ಅಪಾಯಕಾರಿಯಾದ ಆಸ್ಪತ್ರೆ(ಜೈವಿಕ) ತ್ಯಾಜ್ಯ ರಾಶಿ ರಾಶಿ ಕೆರೆಯಲ್ಲಿ ಸುರಿಯಲಾಗಿದೆ. ಇದರಿಂದ ಜನ–ಜಾನುವಾರುಗಳಿಗೆ ತೊಂದರೆಯಾಗಲಿದೆ.
ಕೆರೆಯ ಕಾಲುದಾರಿಗಳಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದಿರುವುದರಿಂದ ಇದೇ ಮಾರ್ಗದಲ್ಲಿ ಓಡಾಡುವ ಹಸುಗಳು, ಕುರಿ, ಮೇಕೆಗಳನ್ನು ಮೇಯಿಸಲೆಂದು ಕರೆದೊಯ್ಯುವ ನಗರ ವ್ಯಾಪ್ತಿಯ ರೈತರಿಗೆ ತ್ಯಾಜ್ಯ ಕಂಟಕಪ್ರಾಯವಾಗಿ ಪರಿಣಮಿಸಿದೆ.
ಹಿಂದೆಯೇ ನಡೆದಿತ್ತು: ಎರಡು ವರ್ಷಗಳ ಹಿಂದೆ ಅಪಾಯಕಾರಿಯಾದ ಆಸ್ಪತ್ರೆ ತ್ಯಾಜ್ಯವನ್ನು ಪದೇ ಪದೇ ನಗರದ ಗೌಡನಕೆರೆಗೆ ಸುರಿಯುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಆಗ ಶಿಡ್ಲಘಟ್ಟ ತಾಲ್ಲೂಕು ಆರೋಗ್ಯಾಧಿಕಾರಿ ಅವರು ನಗರದ ಎಲ್ಲಾ ಖಾಸಗಿ ಆಸ್ಪತ್ರೆ, ಕ್ಲಿನಿಕ್ ಮತ್ತು ಲ್ಯಾಬ್ ಗಳಿಗೆ ನೋಟಿಸ್ ಜಾರಿ ಮಾಡಿದ್ದರು. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತ ಮಂಜುನಾಥ್ ಸಹ ಆಗ ಎಚ್ಚರಿಕೆ ನೀಡಿದ್ದರು. ಆಗ ನಿಂತಿದ್ದ ಈ ತ್ಯಾಜ್ಯ ಸುರಿಯುವಿಕೆ ಈಗ ಪುನಃ ಪ್ರಾರಂಭವಾಗಿದೆ.
ಕೆರೆ ಆವರಣದಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಕೆರೆಗಷ್ಟೇ ಅಲ್ಲ ನಮ್ಮ ಜಾನುವಾರುಗಳ ಪ್ರಾಣಕ್ಕೂ ಕುತ್ತು ತರುತ್ತದೆ. ಹುಲು ಮೇಯಿಯುವ ವೇಳೆ ಸೂಜಿ ಯಾವುದೇ ಔಷಧಿ ಡಬ್ಬ ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿಅನಿಲ್ ಕುಮಾರ್ ಉಲ್ಲೂರುಪೇಟೆ
ಪರಿಶೀಲಿಸಿ ಕ್ರಮ
ಖಾಸಗಿ ಆಸ್ಪತ್ರೆ ಕ್ಲಿನಿಕ್ ಮತ್ತು ಲ್ಯಾಬ್ ಗಳೂ ಜೈವಿಕ ತ್ಯಾಜ್ಯವನ್ನು ತೆಗೆದುಕೊಂಡು ಹೋಗುವವರೊಂದಿಗೆ ಒಡಂಬಡಿಕೆ ಮಾಡಿಕೊಂಡಿರಲೇಬೇಕು. ಅವರು ಪ್ರತಿ ದಿನ ಬಂದು ಈ ತ್ಯಾಜ್ಯವನ್ನು ಕೊಂಡೊಯ್ಯುತ್ತಾರೆ. ಇವುಗಳನ್ನು ಎಲ್ಲೆಂದರಲ್ಲಿ ಹಾಕಲೇಬಾರದು. ಗೌಡನಕೆರೆಯಲ್ಲಿ ಸುರಿಯುತ್ತಿರುವ ಜೈವಿಕ ತ್ಯಾಜ್ಯ ಯಾರದ್ದು ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಡಾ.ವೆಂಕಟೇಶಮೂರ್ತಿ ತಾಲ್ಲೂಕು ವೈದ್ಯಾಧಿಕಾರಿ
ಒತ್ತುವರಿಗೆ ಕರಗುತ್ತಿದೆ ಕೆರೆ ಗೌಡನ ಕೆರೆ
ಸರಿ ಸುಮಾರು 99 ಹೆಕ್ಟೇರ್ ವಿಸ್ತೀರ್ಣ ಹೊಂದಿತ್ತು. ಆದರೆ ಕೆರೆ ಈಗ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಕೆರೆ ಒತ್ತುವರಿಯಾಗುತ್ತಿದೆ. ಈ ಕೆರೆಯಲ್ಲಿ ನೀರು ಸಂಗ್ರಹಗೊಂಡರೆ ನಗರಕ್ಕೆ ನೀರು ಸರಬರಾಜು ಮಾಡುವ ಹಲವಾರು ಕೊಳವೆ ಬಾವಿಗಳು ಹಾಗೂ ಸುತ್ತಲಿನ ಗ್ರಾಮಗಳ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಆದರೆ ದಶಕಗಳಿಂದಲೂ ಮಳೆಯ ಕೊರತೆಯಿಂದ ಕೆರೆಗೆ ನೀರು ಬಾರದೆ ಯಥೇಚ್ಛವಾಗಿ ಜಾಲಿಗಿಡಗಳು ಬೆಳೆದಿವೆ. ಕಾಲಕಾಲಕ್ಕೆ ಇವುಗಳನ್ನು ತೆರವು ಮಾಡದ ಪರಿಣಾಮ ಇಡೀ ಕೆರೆಯನ್ನೇ ಜಾಲಿ ಗಿಡಗಳು ಆಕ್ರಮಿಸಿವೆ. ಇದರ ಜೊತೆ ಒತ್ತುವರಿ ಭೂತದಿಂದ ಕೆರೆ ವಿಸ್ತರ್ಣ ಕರಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.