ADVERTISEMENT

ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 5:18 IST
Last Updated 4 ಫೆಬ್ರುವರಿ 2021, 5:18 IST
ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿ ಬಳಿ ಸಿಪಿಎಂ ಕಾರ್ಯಕರ್ತರು ಬಜೆಟ್ ಪ್ರತಿಯನ್ನು ಸುಟ್ಟು ಪ್ರತಿಭಟಿಸಿದರು
ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿ ಬಳಿ ಸಿಪಿಎಂ ಕಾರ್ಯಕರ್ತರು ಬಜೆಟ್ ಪ್ರತಿಯನ್ನು ಸುಟ್ಟು ಪ್ರತಿಭಟಿಸಿದರು   

ಗುಡಿಬಂಡೆ: ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಅನ್ನು ವಿರೋಧಿಸಿ ಸಿಪಿಎಂ ಕಾರ್ಯಕರ್ತರು ಬಜೆಟ್ ಪ್ರತಿಯನ್ನು ಸುಟ್ಟು ಪ್ರತಿಭಟಿಸಿದರು.

ಸಿಪಿಎಂ ಮುಖಂಡ ಎಚ್.ಪಿ.ಲಕ್ಷ್ಮಿನಾರಾಯಣ ಮಾತನಾಡಿ, ‘ದೇಶ ಪ್ರಥಮ ಬಾರಿ ಕಂಡಂತಹ ಕಳಪೆ, ಕಾರ್ಮಿಕ, ರೈತ ವಿರೋಧಿ ಬಜೆಟ್ ಇದಾಗಿದೆ. ಕೇವಲ ಅಂಬಾನಿ, ಅದಾನಿಯಂತಹ ಶ್ರೀಮಂತರಿಗೆ, ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಈ ಬಜೆಟ್ ಪೂರಕವಾಗಿದೆ. ಶಿಕ್ಷಣ, ಉದ್ಯೋಗ ಸೃಷ್ಟಿ, ವ್ಯವಸಾಯ, ನೂತನ ಕೈಗಾರಿಕೆಗಳ ಸ್ಥಾಪನೆಗೆ ಯಾವುದೇ ಒತ್ತು ನೀಡಿಲ್ಲ. ಇಂತಹ ಜನವಿರೋಧಿ, ಕಣ್ಣೊರೆಸುವ ಬಜೆಟ್ ಅನ್ನು ಕೇಂದ್ರಸರ್ಕಾರ ಕೂಡಲೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ ಮಾತನಾಡಿ, ‘ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ನೀಡಬೇಕು. ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಜೊತೆಗೆ ರೈತ ವಿರೋಧಿ ಕಾಯ್ದೆಗಳನ್ನು ಸಹ ಹಿಂಪಡೆಯಬೇಕು. ಸಾಮಾನ್ಯ ಕಾರ್ಮಿಕನ ವೇತನ ನಿಗದಿ ಮಾಡಲು ಮೀನಾಮೇಷ ಎಣಿಸುತ್ತಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಕೆಲಸ ಆಗಬೇಕು. ಜೊತೆಗೆ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ತಾ.ಪಂ. ಸದಸ್ಯ ಮಂಜುನಾಥ್, ಸಿಪಿಎಂ ಪಕ್ಷದ ಮುಖಂಡರಾದ ಆದಿನಾರಾಯಣ, ನಾಗರಾಜು, ರಮೇಶ್‌ಬಾಬು, ದೇವರಾಜು, ಉಪ್ಪಾರಹಳ್ಳಿ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.