ADVERTISEMENT

ನಂದಿಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ: ಯಾವುದಕ್ಕೆ ‘ಅಸ್ತು’ ಮುದ್ರೆ

ಡಿಪಿಆರ್ ಸಮೇತ ಯೋಜನೆಗಳ ಬೇಡಿಕೆ ಪಟ್ಟಿ ನೀಡಿದ ಬಾಗೇಪಲ್ಲಿ ಶಾಸಕ ಎಸ್‌.ಎನ್. ಸುಬ್ಬಾರೆಡ್ಡಿ

ಡಿ.ಎಂ.ಕುರ್ಕೆ ಪ್ರಶಾಂತ
Published 15 ಜೂನ್ 2025, 6:35 IST
Last Updated 15 ಜೂನ್ 2025, 6:35 IST
ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ತುಂಬಿ ಹರಿದ ಸಂದರ್ಭ (ಸಂಗ್ರಹ ಚಿತ್ರ)
ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ತುಂಬಿ ಹರಿದ ಸಂದರ್ಭ (ಸಂಗ್ರಹ ಚಿತ್ರ)   

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಗಿರಿಧಾಮದಲ್ಲಿ ಜೂ.19ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಈ ಸಂಪುಟ ಸಭೆ ನಡೆಯಲಿದೆ.

ಜಿಲ್ಲೆಯಲ್ಲಿಯೇ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರಲ್ಲಿ ಅಭಿವೃದ್ಧಿಯ ನಿರೀಕ್ಷೆಗಳನ್ನು ಅಪಾರವಾಗಿಸಿದೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಯಾವ ಯಾವ ಕೆಲಸಗಳು ಆಗಬೇಕು ಎನ್ನುವ ಬೇಡಿಕೆಗಳ ಪಟ್ಟಿಯನ್ನು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಲುಪಿಸಿದ್ದಾರೆ ಎನ್ನಲಾಗುತ್ತಿದೆ. 

ರಾಜ್ಯ ಗಡಿಭಾಗ ವಿಧಾನಸಭಾ ಕ್ಷೇತ್ರ ಮತ್ತು ಹಿಂದುಳಿದ ತಾಲ್ಲೂಕುಗಳು ಎನಿಸಿರುವ ಬಾಗೇಪಲ್ಲಿ, ಚೇಳೂರು, ಗುಡಿಬಂಡೆಯ ಅಭಿವೃದ್ಧಿ ವಿಚಾರವಾಗಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಯೋಜನೆಗಳ ಪಟ್ಟಿಯನ್ನು ರೂಪಿಸಿ ಸಲ್ಲಿಸಿದ್ದಾರೆ. ಈ ಮೂರು ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಅವರು 10 ಯೋಜನೆಗಳ ಜಾರಿಗೆ ಮನವಿ ಸಲ್ಲಿಸಿದ್ದಾರೆ. 

ADVERTISEMENT

ಶಾಸಕರು ಈ ಯೋಜನೆಗಳಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನೂ ಬೇಡಿಕೆಗಳ ಜೊತೆ ಲಗತ್ತಿಸಿದ್ದಾರೆ. ಸುಬ್ಬಾರೆಡ್ಡಿ ಅವರ ಪಟ್ಟಿಯಲ್ಲಿ ಈ ಹಿಂದೆಯೇ ಚರ್ಚೆ ಆಗಿದ್ದ ಮತ್ತು ಹಣ ಮಂಜೂರಾಗಿರುವ ಮತ್ತು ಹೊಸ ಯೋಜನೆಗಳು ಇವೆ.

ಬಾಗೇಪಲ್ಲಿ ತಾಲ್ಲೂಕಿನ ವಿಶೇಷವಾಗಿ ಪಾತಪಾಳ್ಯ ಮತ್ತು ಚೇಳೂರು ಭಾಗದ ಜನರ ಬಹುಕಾಲದ ಬೇಡಿಕೆಯಾದ ಗಂಟ್ಲಮಲ್ಲಮ್ಮ ಅಣೆಕಟ್ಟೆ ವಿಚಾರವೂ ಶಾಸಕರ ಬೇಡಿಕೆಗಳ ಪಟ್ಟಿಯಲ್ಲಿದೆ. 

ಅಣೆಕಟ್ಟೆ ನಿರ್ಮಾಣಕ್ಕೆ ₹ 120 ಕೋಟಿಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ದಗೊಳಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರವೂ ಯೋಜನೆಗೆ ನಿಶಾನೆ ತೋರಿದೆ. ಆದರೆ ಕೆಲವು ಅಡೆತಡೆಗಳು ಯೋಜನೆಗಿದ್ದು ಅವುಗಳ ನಿವಾರಣೆಯತ್ತ ಸಂಪುಟ ಸಭೆಯ ಮೇಲೆ ದೃಷ್ಟಿ ಇದೆ.

ಚಿತ್ರಾವತಿ ನದಿ ನೀರು ತುಂಬಿ ಹರಿದಾಗ ಆಂಧ್ರಕ್ಕೆ ನೀರು ಹರಿಯುತ್ತದೆ. ಆದ್ದರಿಂದ ಈ ನದಿ ಕೆಳಭಾಗದಲ್ಲಿ ಚಿಕ್ಕ ಅಣೆಕಟ್ಟೆ ನಿರ್ಮಿಸಬೇಕು. ಅಲ್ಲಿಂದ ಗಂಟ್ಲಮಲ್ಲಮ್ಮ ಅಣೆಕಟ್ಟೆಗೆ ಮೂಲಕ ನೀರು ಗುರುತ್ವಾಕರ್ಷಣೆ ಮೂಲಕ ಹರಿದು ಹೋಗುತ್ತದೆ. ಹೀಗೆ ಈ ಅಣೆಕಟ್ಟು ನಿರ್ಮಾಣಕ್ಕೆ ₹ 30 ಕೋಟಿ ಡಿಪಿಆರ್ ಸಹ ಮಾಡಿಸಲಾಗಿದೆ. 

ಪ್ರವಾಸೋದ್ಯಮದ ವಿಚಾರದಲ್ಲಿಯೂ ಗುಡಿಬಂಡೆ ಜಿಲ್ಲೆಯಲ್ಲಿ ಉತ್ತಮ ಸ್ಥಾನದಲ್ಲಿ ಇದೆ. ಐತಿಹಾಸಿಕ ಹಿನ್ನೆಲೆಯುಳ್ಳ 7 ಸುತ್ತಿನ ಕೋಟೆಯಿಂದ ಆವೃತವಾಗಿರುವ ಸುರಸದ್ಮಗಿರಿ ಬೆಟ್ಟ, ಅಮಾನಿ ಬೈರಸಾಗರ ಕೆರೆ, ಅತ್ಯಂತ ಪುರಾತನ ಜೈನ ಬಸದಿಗಳು, ಪಟ್ಟಣಕ್ಕೆ ಸಮೀಪದಲ್ಲಿಯೇ ನವಿಲು ಜಿಂಕೆಗಳ ವನ ತಾಲ್ಲೂಕಿನ ಪ್ರವಾಸೋದ್ಯಮಕ್ಕೆ ಗರಿಯನ್ನು ಮೂಡಿಸಿವೆ.ಈ ಪ್ರವಾಸಿ ತಾಣಗಳ ಅಭಿವೃದ್ಧಿಯ ನಿರೀಕ್ಷೆಯನ್ನೂ ತಾಲ್ಲೂಕಿನ ಜನರು ಈ ಹಿಂದಿನಿಂದಲೂ ಹೊಂದಿದ್ದಾರೆ. ಇಡೀ ತಾಲ್ಲೂಕನ್ನು ಪ್ರವಾಸೋದ್ಯಮದ ಯೋಜನೆಯಾಗಿ ಅಭಿವೃದ್ಧಿಗೊಳಿಸಬೇಕು ಎನ್ನುವ ಮಹತ್ವದ ಬೇಡಿಕೆಯನ್ನೂ ಶಾಸಕರು ಸಲ್ಲಿಸಿದ್ದಾರೆ.

ಹೀಗೆ ಮೂರು ತಾಲ್ಲೂಕುಗಳನ್ನು ಒಳಗೊಂಡ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಯಾವುದಕ್ಕೆ ನಿಶಾನೆ ದೊರೆಯುತ್ತದೆ ಎನ್ನುವ ಕುತೂಹಲವಿದೆ. 

ಸಚಿವ ಸಂಪುಟ ಸಭೆಯಿಂದ ನಮಗೆ ಒಳ್ಳೆಯ ಅನುದಾನ ದೊರೆಯಬಹುದು ಎನ್ನುವ ಆಶಾವಾದವಿದೆ. ಈ ಸಭೆ ಜಿಲ್ಲೆಯ ಮಟ್ಟಿಗೆ ಮಹತ್ವದ್ದು.
– ಎಸ್‌.ಎನ್.ಸುಬ್ಬಾರೆಡ್ಡಿ ಶಾಸಕ

ಸುಬ್ಬಾರೆಡ್ಡಿ ಅವರ ಪ್ರಸ್ತಾವಗಳು

* ಬಾಗೇಪಲ್ಲಿಯನ್ನು ‘ಭಾಗ್ಯ ನಗರ’ ಎಂದು ಹೆಸರು ಬದಲಾಯಿಸಬೇಕು.

* ಬಜೆಟ್‌ನಲ್ಲಿ ಕಾರ್ಮಿಕ ವಸತಿ ಶಾಲೆಯನ್ನು ಘೋಷಿಸಲಾಗಿದೆ. ₹ 40 ಕೋಟಿ ವೆಚ್ಚದ ಈ ಕಾರ್ಮಿಕ ವಸತಿ ಶಾಲೆಯನ್ನು ಬಾಗೇಪಲ್ಲಿ ತಾಲ್ಲೂಕಿನಲ್ಲಿ ನಿರ್ಮಿಸಬೇಕು.

* ಗುಡಿಬಂಡೆಯಲ್ಲಿ ಕ್ರೀಡಾಂಗಣ ನಿರ್ಮಾಣ. ಗುಡಿಬಂಡೆ ತಾಲ್ಲೂಕನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ.

* ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಾಣಕ್ಕೆ ನಿಗಮದಿಂದ ಹಸಿರು ನಿಶಾನೆ ತೋರಬೇಕು.

* ಚಿತ್ರಾವತಿ ನದಿ ನೀರು ತುಂಬಿ ಹರಿದಾಗ ಆಂಧ್ರಕ್ಕೆ ನೀರು ಹರಿಯುತ್ತದೆ. ಆದ್ದರಿಂದ ಈ ನದಿ ಕೆಳಭಾಗದಲ್ಲಿ ಚಿಕ್ಕ ಅಣೆಕಟ್ಟೆ ನಿರ್ಮಿಸಬೇಕು.

* ಬಾಗೇಪಲ್ಲಿಯಲ್ಲಿ ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದಂತೆ ಆಡಳಿತ ಸೌಧ ನಿರ್ಮಾಣ

* ಬಾಗೇಪಲ್ಲಿ ತಾಲ್ಲೂಕಿನಲ್ಲಿ ಮಳೆ ಆಶ್ರಿತ ಮತ್ತು ಒಣಭೂಮಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ

ನಾಳೆ ಸಚಿವರ ಸಭೆ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆ ಮುಖ್ಯ ಕಾರ್ಯದರ್ಶಿ ಅವರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸೋಮವಾರ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಜಿಲ್ಲೆಯ ಶಾಸಕರು ಸಹ ಭಾಗಿಯಾಗಲಿದ್ದಾರೆ ಎನ್ನುತ್ತವೆ ಮೂಲಗಳು. ಈ ಸಭೆಯಲ್ಲಿ ಆಯಾ ಶಾಸಕರು ಸಲ್ಲಿಸಿರುವ ಬೇಡಿಕೆಗಳು ಅವುಗಳ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತದೆ ಎನ್ನಲಾಗುತ್ತಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.