ಗೌರಿಬಿದನೂರು: ‘ಕೇಂದ್ರ ಸರ್ಕಾರದ ಧಮನಕಾರಿ ನೀತಿಗಳಿಂದ ರೈತ ಮತ್ತು ಕಾರ್ಮಿಕರು ಸಂಪೂರ್ಣವಾಗಿ ಬೀದಿಗೆ ಬಿದ್ದಿದ್ದು, ಇದನ್ನು ಖಂಡಿಸಿ ಕಳೆದ ಎರಡು ತಿಂಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ ದೇಶದ ಪ್ರಧಾನಿ ಯಾವುದೇ ರೀತಿಯ ಪರಿಹಾರಕ್ಕೆ ಮುಂದಾಗದಿರುವುದು ಸರ್ವಾಧಿಕಾರಿ ನೀತಿಯಾಗಿದೆ’ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ರೈತ ಮುಖಂಡರು ಆಯೋಜಿಸಿದ್ದ ಟ್ರ್ಯಾಕ್ಟರ್ ಜಾಥಾ ಅವರು ಮಾತನಾಡಿದರು.
‘ಪ್ರಧಾನಿ ಮೋದಿ ಅವರು ಜನ ವಿರೋಧಿ ಜೊತೆಗೆ ರೈತ ವಿರೋಧಿಯಾಗಿ ಅವರ ಕೃಷಿ ಬಾಳಿಗೆ ಕಂಟಕರಾಗಿ ಕಾರ್ಪೋರೇಟ್ ಕಂಪನಿಗಳ ಪರ ಕಾಯ್ದೆ ರೂಪಿಸಿದ್ದಾರೆ. ಈ ಕಾಯ್ದೆಗಳು ಜಾರಿಯಾದರೆ ಮುಂದಿನ ದಿನಗಳಲ್ಲಿ ಕೃಷಿ ಭೂಮಿಯನ್ನು ರೈತ ಕಳೆದುಕೊಂಡು ಕೂಲಿಕಾರ್ಮಿಕನಾಗಿ ಜೀವನ ಮಾಡಬೇಕಾಗುತ್ತದೆ’ ಎಂದರು.
ಹಸಿರು ಸೇನೆ ಹಾಗೂ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಆರ್.ಲಕ್ಷ್ಮೀನಾರಾಯಣ್ ಮಾತನಾಡಿ, ‘ರೈತ ವಿನಾಶಕ್ಕಾಗಿ ಕೇಂದ್ರ ಸರ್ಕಾರ ತಂದ ಕಾಯ್ದೆಗಳು ರೈತ ಮತ್ತು ಕಾರ್ಮಿಕರಿಗೆ ಮಾರಕವಾಗಲಿದೆ. ಕೃಷಿ ಕಾಯ್ದೆ, ಎಪಿಎಂಸಿ ತಿದ್ದುಪಡಿ, ವಿದ್ಯುತ್ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇದ ಕಾಯ್ದೆಗಳಿಂದ ಅವರ ಜೀವನ ದುಸ್ತರವಾಗಲಿದೆ. ಡಾ.ಸ್ವಾಮಿನಾಥನ್ ವರದಿ ಜಾರಿಯಾದರೆ ಮಾತ್ರ ಈ ದೇಶದಲ್ಲಿ ರೈತ ಉಳಿಯಲು ಸಾಧ್ಯ’ ಎಂದು ಹೇಳಿದರು.
ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಆರ್.ರವಿಚಂದ್ರರೆಡ್ಡಿ, ಕರವೇ ಅಶ್ವಥ್ಥನಾರಾಯಣ್, ಪ್ರಭು, ಮಾಳಪ್ಪ, ಸನತ್ ಕುಮಾರ್, ಗಂಗಪ್ಪ, ಮುದ್ದುರಂಗಪ್ಪ, ಆದಿನಾರಾಯಣಪ್ಪ, ರವಿಚಂದ್ರರೆಡ್ಡಿ, ಜಿ.ಸಿದ್ದಗಂಗಪ್ಪ, ಗುಂಡಾಪುರ ಲೋಕೇಶಗೌಡ, ರಾಜಣ್ಣ ಸೇರಿದಂತೆ ಮುಂತಾದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ನಂತರ ನಂತರ ಬಿಡುಗಡೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.