ಚಿಕ್ಕಬಳ್ಳಾಪುರ: ವೃತ್ತಿಪರ ಕೋರ್ಸ್ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜಿಲ್ಲೆಯ 13 ಕೇಂದ್ರಗಳಲ್ಲಿ ಮೊದಲ ದಿನವಾದ ಗುರುವಾರ ಕೋವಿಡ್ ಮಾರ್ಗಸೂಚಿ ಅನ್ವಯ ಸುಸೂತ್ರವಾಗಿ ನಡೆದವು.
ಚಿಕ್ಕಬಳ್ಳಾಪುರದಲ್ಲಿ 7, ಚಿಂತಾಮಣಿ ಮೂರು, ಶಿಡ್ಲಘಟ್ಟ, ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲ್ಲೂಕು ಕೇಂದ್ರದಲ್ಲಿ ತಲಾ ಒಂದು ಕೇಂದ್ರ ತೆರೆಯಲಾಗಿದೆ. ಈ ಬಾರಿ ಒಟ್ಟು 4,565 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಗುರುವಾರ ಬೆಳಿಗ್ಗೆ 10.30ರಿಂದ 11.50ರ ವರೆಗೆ ಜೀವವಿಜ್ಞಾನ, ಮಧ್ಯಾಹ್ನ 2.30ರಿಂದ 3.50ರ ವರೆಗೆ ಗಣಿತ ಪರೀಕ್ಷೆ ನಡೆದವು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ಜೀವವಿಜ್ಞಾನ ಪರೀಕ್ಷೆಗೆ 4,065 ವಿದ್ಯಾರ್ಥಿಗಳು ಹಾಜರಾಗಿ, 500 ಮಂದಿ ಗೈರಾದರು. ಗಣಿತ ಪರೀಕ್ಷೆಗೆ 4,263 ವಿದ್ಯಾರ್ಥಿಗಳು ಹಾಜರಾಗಿ 302 ಮಂದಿ ಗೈರಾದರು. ಕೋವಿಡ್–19 ಪಾಸಿಟಿವ್ ಬಂದ ಚಿಕ್ಕಬಳ್ಳಾಪುರದ ಇಬ್ಬರು, ಬಾಗೇಪಲ್ಲಿಯ ಒಬ್ಬ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.
ಈ ಬಾರಿಯ ದ್ವಿತೀಯ ಪಿಯುಸಿ ಇಂಗ್ಲಿಷ್ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮಾದರಿಯಲ್ಲೇ ಕೋವಿಡ್–19 ಮಾರ್ಗಸೂಚಿ ಅನ್ವಯ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿ ಕೇಂದ್ರದ ಒಳಗೆ ಬಿಡಲಾಯಿತು. ಶೀತ, ಕೆಮ್ಮ, ಜ್ವರ ಇದ್ದವರಿಗೆ ಕೇಂದ್ರದಲ್ಲಿಯೇ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು.
ಶುಕ್ರವಾರ ಬೆಳಿಗ್ಗೆ 10.30ರಿಂದ 11.50ರವರೆಗೆ ಭೌತವಿಜ್ಞಾನ, ಮಧ್ಯಾಹ್ನ 2.30ರಿಂದ 3.50ರ ವರೆಗೆ ರಸಾಯನ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
‘ಪರೀಕ್ಷಾ ಕೇಂದ್ರಗಳನ್ನು ಸೋಂಕು ನಿವಾರಕದಿಂದ ಶುಚಿಗೊಳಿಸಲಾಗಿದ್ದು, ಸ್ಯಾನಿಟೈಸರ್, ಮಾಸ್ಕ್ಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಒಬ್ಬರು ಜಾಯಿಂಟ್ ಚೀಫ್, ಒಬ್ಬರು ಕಸ್ಟೋಡಿಯನ್, ಇಬ್ಬರು ಸಿಟ್ಟಿಂಗ್ ಸ್ಕ್ಯಾಡ್ ಇರುತ್ತಾರೆ’ ಎಂದು ಹಂಗಾಮಿ ಡಿಡಿಪಿಯು ಆನಂದ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.