ADVERTISEMENT

ಶಾಸಕ ಶಿವಶಂಕರರೆಡ್ಡಿ ಹೇಳಿಕೆಗೆ ಚೌಡರೆಡ್ಡಿ ತಿರುಗೇಟು

ಶಾಸಕ ಶಿವಶಂಕರರೆಡ್ಡಿ ಹೇಳಿಕೆಗೆ ಚೌಡರೆಡ್ಡಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 2:13 IST
Last Updated 7 ಅಕ್ಟೋಬರ್ 2020, 2:13 IST
 ತೂಪಲ್ಲಿ ಚೌಡರೆಡ್ಡಿ
 ತೂಪಲ್ಲಿ ಚೌಡರೆಡ್ಡಿ   

ಬಾಗೇಪಲ್ಲಿ: ಬಯಲುಸೀಮೆ ಪ್ರದೇಶದ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಧಾನಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ ವಿಫಲರಾಗಿದ್ದಾರೆ ಎಂಬ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಹೇಳಿಕೆ ಸರಿಯಲ್ಲ. ಕ್ಷೇತ್ರದ ಶಿಕ್ಷಕರ, ಉಪನ್ಯಾಸಕರ, ಪದವೀಧರರ ಜ್ವಲಂತ ಸಮಸ್ಯೆಗಳ ಪರವಾಗಿ ವಿಧಾನ ಪರಿಷತ್‌ನಲ್ಲಿ ಹೋರಾಟ ನಡೆಸಿರುವುದಾಗಿ ಚೌಡರೆಡ್ಡಿ, ಶಾಸಕರಿಗೆ ತಿರಗೇಟು ನೀಡಿದರು. ‌

ಪಟ್ಟಣದ ವಿಕಾಸ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಜತೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೆ.ಸಿವ್ಯಾಲಿ, ಎತ್ತಿಹೊಳೆ ನೀರು ಬಯಲುಸೀಮೆ ಪ್ರದೇಶಗಳಿಗೆ ಪೂರೈಕೆ ಮಾಡಬೇಕು ಎಂದು ಹಿರಿಯ ನಾಯಕರಾದ ಎಚ್.ಡಿ.ದೇವೇಗೌಡ, ಬಸವರಾಜ ಹೊರಟ್ಟಿ, ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹಲವು ಸಲ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ ಎಂದರು.

ಹೊಸ ಪಿಂಚಣಿ ರದ್ದುಗೊಳಿಸಬೇಕು ಎಂದು ನೌಕರರು ನಡೆಸಿದ ಹೋರಾಟದಲ್ಲಿ ಭಾಗಿಯಾಗಿ ಸ್ಪಂದಿಸಿದ್ದೇನೆ.ಖಾಸಗಿ ಶಾಲಾ ಶಿಕ್ಷಕ, ಉಪನ್ಯಾಸಕರಿಗೆ ₹25ಸಾವಿರ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ, ಸರ್ಕಾರ ₹10 ಸಾವಿರ ನೀಡಲು ಚಿಂತನೆ ನಡೆಸಿರುವುದು ನೋವಿನ ಸಂಗತಿ ಎಂದರು.

ADVERTISEMENT

ಅಕ್ಟೋಬರ್ 28ರಂದು ಅಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಘೋಷಣೆ ಆಗಿದೆ. ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುವ ಶಕ್ತಿ ಇದೆ ಎಂದರು.

ಪೂರ್ವಭಾವಿ ಸಭೆಯಲ್ಲಿ ಜೆಡಿಎಸ್ ಹಿರಿಯ ಮುಖಂಡ ಬಿ.ಆರ್.ನರಸಿಂಹನಾಯ್ಡು, ಯುವ ಮುಖಂಡರಾದ ಸೂರ್ಯನಾರಾಯಣರೆಡ್ಡಿ, ನೂರುಲ್ಲಾ, ಮಹಿಳಾ ಮುಖಂಡರಾದ ಸಿ.ಉಮಾ, ಟಿ.ಎನ್.ಪ್ರಮೀಳಾ, ವಿಕಾಸ ಕಾಲೇಜಿನ ಮುಖ್ಯಸ್ಥ ಟಿ.ಎನ್.ರವಿ ಸೇರಿದಂತೆ ಶಿಕ್ಷಕರು, ಉಪನ್ಯಾಸಕರು, ಪದವೀಧರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.