ಚಿಂತಾಮಣಿ: ನವ ದೆಹಲಿಯ ಭಾರತೀಯ ಕೃಷಿ ಅನುಸಂದಾನ ಪರಿಷತ್ ಹಾಗೂ ಅದರ ಕೃಷಿಗೆ ಸಂಬಂಧಿತ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಕುಲಪತಿ ಎಸ್.ವಿ.ಸುರೇಶ್ ಮಾತನಾಡಿ, ಈ ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ತಾಂತ್ರಿಕತೆ ಮತ್ತು ತಳಿಗಳ ಮಾಹಿತಿ ಲಭ್ಯವಾಗುವಂತೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೃಷಿ ಸಂಶೋಧನೆ ಮತ್ತು ರೈತ ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ. ಮೇ 29 ರಿಂದ ಜೂನ್ 12ರವರೆಗೆ ಈ ಅಭಿಯಾನ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ತಿಳಿಸಿದರು.
ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಅಡಿಯಲ್ಲಿ ಕೃಷಿ ಸಮುದಾಯಕ್ಕೆ ಮಣ್ಣಿನ ಆರೋಗ್ಯ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಬೀಜೋಪಚಾರದ ಬಗ್ಗೆ ಸಲಹೆ ನೀಡಲಾಗುವುದು. ಹವಾಮಾನ ಸ್ಥಿತಿ ಸ್ಥಾಪಕ ತಂತ್ರಜ್ಞಾನಗಳು, ನೈಸರ್ಗಿಕ ಸಾವಯವ ಕೃಷಿ, ತೋಟಗಾರಿಕಾ ಬೆಳೆಗಳಲ್ಲಿ ಉತ್ಪಾದನಾ ತಂತ್ರಜ್ಞಾನಗಳು, ಸಮಗ್ರ ಕೃಷಿ ವ್ಯವಸ್ಥೆ ಸಂಪನ್ಮೂಲ ಸಂರಕ್ಷಣಾ ತಂತ್ರಜ್ಞಾನಗಳ ಕುರಿತು ಮಾರ್ಗದರ್ಶನ ಮಾಡಲಾಗುವುದು ಎಂದರು.
ಪಶು ಆಹಾರ ಆರೋಗ್ಯ ನಿರ್ವಹಣೆ, ಪೌಷ್ಠಿಕಾಂಶ ಉದ್ಯಾನ ಮೌಲ್ಯವರ್ಧನೆ ಕುರಿತು ಮಾಹಿತಿ ಪ್ರಸಾರ ಮಾಡಲಾಗುವುದು. ಭವಿಷ್ಯದ ಸಂಶೋಧನೆಯನ್ನು ರೂಪಿಸಲು ರೈತರಿಂದ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಗ್ರಹಿಸುವುದು. ಈ ರಾಷ್ಟ್ರೀಯ ಜನಜಾಗೃತಿ ಅಭಿಯಾನದಲ್ಲಿ ವಿಜ್ಞಾನಿಗಳು ರೈತರೊಂದಿಗೆ ಕೃಷಿ ಸಂಬಂಧಿತ ಸಮಸ್ಯೆಗಳ ಬಗ್ಗೆ ನೇರ ಸಂವಾದ ನಡೆಸಿ ಪರಿಹಾರದ ಸಲಹೆಗಳನ್ನು ನೀಡುತ್ತಾರೆ ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕ (ತಾಂತ್ರಿಕ) ಮತ್ತು ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಎನ್.ನರೇಶಬಾಬು. ಕೇಂದ್ರ ರೇಷ್ಮೆ ಮಂಡಳಿ, ಜವಳಿ ಸಚಿವಾಲಯ, ಭಾರತ ಸರ್ಕಾರದ ಮೋಹನ್ ಐ ನಾಯಕ್, ರೇಷ್ಮೆ ಕೃಷಿ ಮಹಾವಿದ್ಯಾಲಯದ ಡೀನ್ (ರೇಷ್ಮೆ) ಪಿ. ವೆಂಕಟರವಣ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ.ಪಾಪಿರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.