ಚಿಕ್ಕಬಳ್ಳಾಪುರ: ನಗರದ ನಗರಸಭೆ ಖಾಸಗಿ ಬಸ್ ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಅನರ್ಹಗೊಂಡ ಶಾಸಕ ಡಾ.ಕೆ.ಸುಧಾಕರ್ ಅವರು ಬೀದಿಬದಿ ವ್ಯಾಪಾರಿಗಳ ಅಹವಾಲು ಆಲಿಸಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಂಭಾಗ ವ್ಯಾಪಾರ ಮಾಡುವ ಬೀದಿ ವ್ಯಾಪಾರಿಗಳ ಪೆಟ್ಟಿಗೆ ಅಂಗಡಿಗಳು ಮತ್ತು ತಳ್ಳು ಗಾಡಿಗಳನ್ನು ಇತ್ತೀಚೆಗೆ ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇದರಿಂದ ಬಡ ವ್ಯಾಪಾರಿಗಳ ಬದುಕು ಬೀದಿಪಾಲಾಗಿದೆ. ಹೀಗಾಗಿ ಅವರಿಗೆ ಪರಿಹಾರ ನೀಡುವ ಜತೆಗೆ ಪರ್ಯಾಯ ಜಾಗ ಒದಗಿಸಿ ಪುನರ್ ವಸತಿ ಕಲ್ಪಿಸಬೇಕು ಎಂದು ವ್ಯಾಪಾರಿಗಳು ಮನವಿ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಸುಧಾಕರ್, ‘ಪ್ರಸ್ತುತ ನಗರದಲ್ಲಿ ನಗರೋತ್ಥಾನ ಹಾಗೂ ವಿಶೇಷ ಅನುದಾನದಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಚರಂಡಿ ಕಾಮಗಾರಿಗಾಗಿ ಅಂಗಡಿಗಳನ್ನು ತೆರವುಗೊಳಿಸಬೇಕಾಗಿದೆ. ಕಾಮಗಾರಿ ಮುಗಿದ ನಂತರ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ಭರವಸೆ ನೀಡಿದರು.
ನಗರಸಭೆ ಮಾಜಿ ಸದಸ್ಯರಾದ ಅಪ್ಪಾಲು ಮಂಜು, ಮುನಿಕೃಷ್ಣ, ಗಜೇಂದ್ರ, ಜಯಮ್ಮ, ಪದ್ಮಮ್ಮ, ಮೊಬೈಲ್ ಬಾಬು, ಮಹಾಕಾಳಿ ಬಾಬು, ಸುಬ್ರಮಣ್ಯಾಚಾರಿ, ಮುಖಂಡರಾದ ಜಿಯಾವುಲ್ಲಾ, ಮುಜಾ಼ಮಿಲ್, ಅಸ್ಲಂ, ಗಂಗರಾಜು, ತನ್ವೀರ್ ಪಾಷ, ಅನಿಲ್, ಯೂನಿಸ್, ಕುಂಬಿ ನರಸಿಂಹಮೂರ್ತಿ, ಜಾಲಪ್ಪ, ದಾಸ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.