ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಬಂಧಿಗಳು ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಸೋಮವಾರ ಹಲ್ಲೆ ನಡೆಸಿದ್ದಾರೆ.
‘ನ್ಯಾಯಾಲಯಕ್ಕೆ ಹೋಗುವ ವಿಚಾರವನ್ನು ಮೊದಲೇ ನಮಗೆ ಏಕೆ ತಿಳಿಸಿಲ್ಲ. ಉಪಾಹಾರ ನೀಡದೆಯೇ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ’ ಎಂದು ಕಾರಾಗೃಹದ ಸಿಬ್ಬಂದಿ ಜೊತೆ ಈ ವಿಚಾರಣಾಧೀನ ಕೈದಿಗಳು ಜಗಳ ತೆಗೆದಿದ್ದಾರೆ. ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ.
ಜೈಲರ್ ಸುನೀಲ್ ಡಿ.ಗಲ್ಲೆ, ಮುಖ್ಯ ವೀಕ್ಷಕರ ಮೇಲೆ ಹಲ್ಲೆ ನಡೆಸಿದ್ದಾರೆ. ದ್ವಾರಕಪಾಲಕ ಶಶಿಕುಮಾರ್ ಆರ್. ಧರಿಸಿದ್ದ ಬಾಡಿ ಕ್ಯಾಮೆರಾ ನಾಶಪಡಿಸಿದ್ದಾರೆ. ಸಹಾಯಕ ಜೈಲರ್ ಮಲ್ಲಿಕಾರ್ಜುನಪ್ಪ ಅವರಿಂದ ದಾಸ್ತಾನು ಕೊಠಡಿಯ ಬೀಗದ ಕೀಲಿಯನ್ನು ಬಲವಂತವಾಗಿ ಕಿತ್ತುಕೊಂಡು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ.
ಅಡುಗೆಕೋಣೆಗೆ ತೆರಳಿ ಅಲ್ಲಿದ್ದ ಅಡುಗೆ ಅನಿಲದ ಸಿಲಿಂಡರ್ಗಳನ್ನು ಎಸೆದಾಡಿದ್ದಾರೆ. ಅಲ್ಲಿದ್ದ ಮಹಿಳಾ ಸಿಬ್ಬಂದಿಯನ್ನೂ ಅವಾಚ್ಯವಾಗಿ ನಿಂದಿಸಿದ್ದಾರೆ.
ತಕ್ಷಣ ಕಾರಾಗೃಹದ ಅಧೀಕ್ಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಹೆಚ್ಚಿನ ಸಿಬ್ಬಂದಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.