ಚಿಂತಾಮಣಿ: ಟೊಮೆಟೊ ಬೆಳೆಯಲ್ಲಿ ತೀವ್ರವಾಗಿ ಹರಡುತ್ತಿರುವ ಎಲೆ ಮುದುಡು ರೋಗದ ಪರಿಶೀಲನೆಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಾಲ್ಲೂಕಿನ ಬೂರಗಮಾಕಲಹಳ್ಳಿ, ಊಲವಾಡಿ ಗ್ರಾಮಗಳ ರೋಗಪೀಡಿತ ತಾಕುಗಳಿಗೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಎಲೆಮುದುಡು ರೋಗ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬೆಳೆಗಾರರಿಗೆ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಿದರು. ರೋಗಪೀಡಿತ ಸಸಿಗಳನ್ನು ನಾಟಿ ಮಾಡುವುದು. ಬಿಸಿಲು ಮತ್ತು ಶುಷ್ಕ ವಾತಾವರಣದಿಂದ ರೋಗವನ್ನು ಹರಡುವ ಬಿಳಿ ನೊಣದ ಸಂತತಿ ಹೆಚ್ಚಾಗುತ್ತಿರುವುದು, ಅತಿಯಾಗಿ ಕೀಟನಾಶಕಗಳ ಬಳಕೆ ಹಾಗೂ ಸಾರಜನಕವನ್ನು ಹೆಚ್ಚಾಗಿ ಬಳಸುವುದರಿಂದ ಗಿಡಗಳಲ್ಲಿ ರೋಗ ಮತ್ತು ಬಿಳಿ ನೊಣ ಕೀಟಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ರೈತರಿಗೆ ಮಾಹಿತಿ ನೀಡಲಾಯಿತು.
ರೈತರು ರೋಗನಿರೋಧಕ ಶಕ್ತಿ ಹೊಂದಿರುವ ಹೈಬ್ರಿಡ್ ಟೊಮೆಟೊ ತಳಿಗಳಾದ ನಂದಿ, ವೈಭವ್, ಸಂಕ್ರಾಂತಿ, ಆರ್ಕಾ ಅಭಿಜಿತ್ ಮತ್ತು ಆರ್ಕಾ ರಕ್ಷಕ್ ಆಯ್ಕೆ ಮಾಡಿಕೊಳ್ಳಬೇಕು. ಸಸಿ ಮಡಿಗಳಲ್ಲಿ 40 ಮೆಷ್ ನೈಲಾನ್ ಪರದೆ ಬಳಸಬೇಕು.
ಟೊಮೆಟೊ ಸುತ್ತಲೂ 2 ರಿಂದ 4 ಸಾಲು ಜೋಳದ ಬೆಳೆ ಬೆಳೆಯುವುದರಿಂದ ಬಿಳಿ ನೊಣ ಹರಡುವುದನ್ನು ತಡೆಯಬಹುದು. ಆರಂಭಿಕ ಹಂತದಲ್ಲಿ ರೋಗ ಪೀಡಿತ ಸಸಿಗಳು ಕಂಡುಬಂದರೆ ಕಿತ್ತು ಸುಟ್ಟು ಹಾಕಬೇಕು. ಪ್ರತಿ ಎಕರೆಗೆ 10 ಹಳದಿ ಅಂಟು ಪಟ್ಟಿಗಳನ್ನು ಗಿಡಕ್ಕಿಂತ ಒಂದು ಅಡಿ ಎತ್ತರದಲ್ಲಿ ಕಟ್ಟಬೇಕು. 15 ದಿನಗಳಿಗೊಮ್ಮೆ ಅಂಟುಪಟ್ಟಿಗಳನ್ನು ಬದಲಾಯಿಸಬೇಕು ಎಂದು ರೈತರಿಗೆ ಸೂಚಿಸಿದರು.
ತೋಟಗಾರಿಕೆ ಇಲಾಖೆ ನಿರ್ದೇಶಕ ಕೆ. ನಾಗೇಂದ್ರ ಪ್ರಸಾದ್, ಜಂಟಿ ನಿರ್ದೇಶಕ ಡಾ. ಕದಿರೇಗೌಡ, ಉಪ ನಿರ್ದೇಶಕಿ ಡಾ. ಎಂ. ಗಾಯತ್ರಿ, ಸಹಾಯಕ ನಿರ್ದೇಶಕ ಬಾಲಕೃಷ್ಣ ಮತ್ತು ಅಂಜನ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎಂ. ಪಾಪಿರೆಡ್ಡಿ, ಸಸ್ಯರೋಗ ವಿಜ್ಞಾನಿ ಡಾ. ಬಿ.ಸ್ವಾತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.