ಶಿಡ್ಲಘಟ್ಟ: ಕುದುರೆ ಸವಾರಿ ಎಂಬುದು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮೀಣರಿಗೆ ಕೈಗೆ ಎಟುಕದ ದ್ರಾಕ್ಷಿಯಿದ್ದಂತೆ. ಆದರೆ, ಇದಕ್ಕೆ ಅಪವಾದವೆಂಬಂತೆ, ‘ನೀವು ಯಾವತ್ತಾದರೂ ಕುದುರೆ ಸವಾರಿ ಮಾಡಿದ್ದೀರಾ? ಅಥವಾ ಕುದುರೆಗಳ ಜೊತೆ ಒಂದಿಷ್ಟು ಸಮಯ ಕಳೆದಿದ್ದೀರಾ? ಇಲ್ಲಾ ಅಲ್ವಾ? ಈ ಆಸೆಗಳನ್ನ ಪೂರೈಸಿಕೊಳ್ಳಬಹುದು. ಬನ್ನಿ ನಿಮಗೆ ಕುದುರೆ ಸವಾರಿ ಕಲಿಸಿಕೊಡುತ್ತೇನೆ’ ಎಂದು ಆತ್ಮವಿಶ್ವಾಸ ದಿಂದ ನುಡಿಯುತ್ತಾರೆ ಶಿಡ್ಲಘಟ್ಟದ ಉಲ್ಲೂರುಪೇಟೆಯ ದೇವರಾಜ್.
‘ನಗರಸಭೆ ಉದ್ಯಾನದ ಬಳಿ ನಮ್ಮ ತೋಟವಿದೆ. ನಾನು ಮೂರು ಕುದುರೆಗಳನ್ನು ಸಾಕಿದ್ದೇನೆ. ಇನ್ನಷ್ಟು ತರುವ ಉದ್ದೇಶವಿದೆ. ಇಲ್ಲಿ ನೀವು ಕುದುರೆ ಸವಾರಿ ಕಲಿಯಬಹುದು. ಕುದುರೆ ಜೊತೆಗೆ ಸಮಯ ಕಳೆಯಬಹುದು. ಅಷ್ಟೇ ಅಲ್ಲದೆ ಕುದುರೆಗಳೊಂದಿಗೆ ಗೆಳೆತನ ಮಾಡಿಕೊಳ್ಳಬಹುದು. ಜೊತೆಗೆ ಕುದುರೆ ಸವಾರಿಯನ್ನೂ ಕಲಿಯಬಹುದು’ ಎನ್ನುತ್ತಾರೆ ಅವರು.
‘ನನಗೆ ಚಿಕ್ಕಂದಿನಿಂದಲೂ ಕುದುರೆ, ಕುದುರೆ ಸವಾರಿ ಅಂದರೆ ಇಷ್ಟ. ನನ್ನಂತೆಯೇ ಕುದುರೆ ಸವಾರಿ ಮಾಡುವ ಆಸೆಯಿರುವ ಮಕ್ಕಳಿಗೆ ತರಬೇತಿ ನೀಡುವ ಆಸೆಯಿದೆ. ಕಳೆದ ಒಂದು ವರ್ಷದಿಂದ ಕುದುರೆಗಳನ್ನು ಸಾಕುತ್ತಿದ್ದೇನೆ. ಪರಿಣತರಿಂದ ತರಬೇತಿ ಸಹ ಪಡೆದಿದ್ದೇನೆ. ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೂ ಕುದುರೆ ಸವಾರಿಯನ್ನು ಕಲಿಸುತ್ತೇನೆ’ ಎನ್ನುತ್ತಾರೆ.
‘ಬ್ಲಡ್ ಲೈನ್ ಜಾತಿಯ ಕುದುರೆ ಯನ್ನು ₹1.30 ಲಕ್ಷ ಕೊಟ್ಟು ತಂದು ಸಾಕುತ್ತಿದ್ದೇನೆ. ಇದರೊಂದಿಗೆ ಟಟ್ಟು ಮತ್ತು ಫೋನಿ ಎಂಬ ಭಾರತೀಯ ತಳಿಗಳನ್ನೂ ಸಾಕುತ್ತಿದ್ದೇನೆ. ಕಾಥಿಯಾವಾರಿ ಮತ್ತು ಮಾರ್ವಾರಿ ತಳಿಗಳ ಕುದುರೆಗಳನ್ನೂ ಸಹ ಸದ್ಯದಲ್ಲಿಯೇ ತರುತ್ತೇನೆ’ ಎಂದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.