ಗೌರಿಬಿದನೂರು: ತಾಲ್ಲೂಕಿನಲ್ಲಿರುವ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ಪಡೆದು ಬಡವರು ಮತ್ತು ಕಾರ್ಮಿಕ ವರ್ಗದವರ ಬದುಕಿಗೆ ನೆರವಾಗಲು ನಮ್ಮ ಬಣದ ಎಲ್ಲ ಮುಖಂಡರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಬದ್ಧರಾಗಿದ್ದಾರೆ ಎಂದು ಕೆ.ಎಚ್.ಪಿ ಫೌಂಡೇಷನ್ ಅಧ್ಯಕ್ಷ ಕೆ.ಎಚ್. ಪುಟ್ಟಸ್ವಾಮಿಗೌಡ ತಿಳಿಸಿದರು.
ತಾಲ್ಲೂಕಿನ ಡಿ. ಪಾಳ್ಯ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕೆ.ಎಚ್.ಪಿ ಬಣದ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಬಣದ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಮೂಲಕ ಬಣವನ್ನು ಸದೃಢ ಮಾಡಲು ಸಿದ್ಧರಾಗಿದ್ದೇವೆ. ಡಿ. ಪಾಳ್ಯ ಹೋಬಳಿಯ ಮೂರು ತಾ.ಪಂ ಹಾಗೂ ಒಂದು ಜಿ.ಪಂ ಸ್ಥಾನವನ್ನು ತಮ್ಮ ಬಣದ ತೆಕ್ಕೆಗೆ ಪಡೆಯಲು ಶ್ರಮಿಸುತ್ತಾ ಕೆ.ಎಚ್.ಪಿ ಬಣವನ್ನು ಸದೃಢವಾದ ಉಕ್ಕಿನ ಕೋಟೆಯಾಗಿ ನಿರ್ಮಾಣ ಮಾಡಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಪ್ರತಿಯೊಬ್ಬ ನಾಗರಿಕರಿಗೂ ಕನಿಷ್ಠ ಮಟ್ಟದ ಮೂಲಸೌಕರ್ಯ ಒದಗಿಸುವ ಮೂಲಕ ಅವರ ಬದುಕಿಗೆ ನೆಮ್ಮದಿ ಕಲ್ಪಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಸುಧಾಕರ್ ಮಾತನಾಡಿ, ಕ್ಷೇತ್ರದಲ್ಲಿ ಪುಟ್ಟಸ್ವಾಮಿಗೌಡ ಅವರ ನೇತೃತ್ವದಲ್ಲಿ ಸಾಕಷ್ಟು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯ ನಡೆಯುತ್ತಿವೆ. ಇದರಿಂದಾಗಿ ಅವರ ಬಣವನ್ನು ಶಕ್ತಿಯುತವಾಗಿ ಮಾಡಿ ಜನರ ಸೇವೆ ಮಾಡಲು ನಾವೆಲ್ಲರೂ ಅವಕಾಶ ಮಾಡಿಕೊಡಬೇಕಾಗಿದೆ ಎಂದರು.
ಗ್ರಾ.ಪಂ. ಚುನಾವಣೆಯಲ್ಲಿ ಕೆ.ಎಚ್.ಪಿ ಬಣದ ವತಿಯಿಂದ ಸಾಕಷ್ಟು ದಸ್ಯರು ಆಯ್ಕೆಯಾಗಿದ್ದಾರೆ. ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆಯಲ್ಲಿಯೂ ಬಹುಮತದೊಂದಿಗೆ ಗೆಲುವು ಸಾಧಿಸಲು ಸಹಕರಿಸಬೇಕು ಎಂದು ಹೇಳಿದರು.
ಮುಖಂಡರಾದ ಕೊಂಡಪ್ಪ, ಮೆಹಬೂಬ್ ಖಾನ್, ಮಹಮ್ಮದ್ ಜಿಕ್ರಿಯಾ, ಎನ್. ಲಲಿತಮ್ಮ, ನೂರುಲ್ಲಾ, ರವಿ, ಜೆ. ಕಾಂತರಾಜ್, ಗಂಗಾಧರಪ್ಪ, ಎಂ. ನರಸಿಂಹಮೂರ್ತಿ, ಜಿ.ಕೆ. ಸತೀಶ್, ಶ್ರೀನಿವಾಸಗೌಡ, ವೆಂಕಟರಾಮರೆಡ್ಡಿ, ಬಸಪ್ಪರೆಡ್ಡಿ, ಅಬ್ದುಲ್ಲಾ, ಶ್ರೀನಾಥ್, ಮುನಿಯಪ್ಪ, ಸೋಮಶೇಖರ್ ರೆಡ್ಡಿ, ಬಾಬುರೆಡ್ಡಿ, ಮಧುರೆಡ್ಡಿ, ಗೋಪಾಲ್ ಗೌಡ, ಮರಳೂರು ಗೋಪಾಲ್, ನರಸಿಂಹರೆಡ್ಡಿ, ಅನಂತರಾಜು, ನಾಗಾರ್ಜುನ್, ಡೆಲ್ಲಿ ಸಂದೀಪ್, ಅನಿಲ್, ಶ್ರೀಧರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.