ಶಿಡ್ಲಘಟ್ಟ: ‘ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಅಧಿಕಾರಿಗಳ ಪರಿಶ್ರಮದಿಂದ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
ನಗರದ ರಾಜೀವಗಾಂಧಿ ಲೇಔಟ್ನ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಯಲ್ಲಿ ಶನಿವಾರ ಸಾರ್ವಜನಿಕ ಆಸ್ಪತ್ರೆಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ರೋಗ ಪತ್ತೆಯಾದರೆ ಚಿಕಿತ್ಸೆ ಪಡೆಯಲು ನಿರ್ಲಕ್ಷ್ಯವಹಿಸಬಾರದು ಎಂದು ಹೇಳಿದರು.
ಕೊರೊನಾ ಸೋಂಕು ದೃಢಪಟ್ಟರೆ ಹದಿನೈದು ದಿನ ಕ್ವಾರಂಟೈನ್ ಆಗಬೇಕಾಗುತ್ತದೆ ಎಂಬ ಆತಂಕದಿಂದ ಮನೆಯಲ್ಲಿಯೇ ಇದ್ದುಬಿಡಬೇಡಿ. ಕೊರೊನಾಗಿಂತಲೂ ಮಧುಮೇಹ, ರಕ್ತದೊತ್ತಡ ಮೊದಲಾದ ಕಾಯಿಲೆ ಬರುತ್ತವೆ. ಅವುಗಳಿಗೆ ಸೂಕ್ತ ಚಿಕಿತ್ಸೆ ಅಗತ್ಯ. ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು.
ಶಿಡ್ಲಘಟ್ಟದ ಕುರುಬರಪೇಟೆಯಲ್ಲಿ ನವೆಂಬರ್ 13ರಂದು ದಂತವೈದ್ಯರು, ಇಲಾಹಿ ನಗರದಲ್ಲಿ ನವೆಂಬರ್ 24ರಂದು ಕಿವಿ, ಮೂಗು ಮತ್ತು ಗಂಟಲು ತಜ್ಞರು, ಫಿಲೇಚರ್ ಕ್ವಾಟರ್ಸ್ನಲ್ಲಿ ಡಿಸೆಂಬರ್ 4 ರಂದು ಮೂಳೆತಜ್ಞರು, ರಹಮತ್ ನಗರದಲ್ಲಿ ಡಿಸೆಂಬರ್ 11ರಂದು ಪ್ರಸೂತಿ ತಜ್ಞರು ಮತ್ತು ಸಿದ್ಧಾರ್ಥನಗರದಲ್ಲಿ ಡಿಸೆಂಬರ್ 18ರಂದು ಕಣ್ಣಿನ ತಜ್ಞರು ಉಚಿತವಾಗಿ ಚಿಕಿತ್ಸೆ ನೀಡಲಿದ್ದಾರೆ ಎಂದರು.
ಸರ್ಕಾರಿ ಆಸ್ಪತ್ರೆಯ ಡಾ.ಗುರು, ಡಾ.ನಿರಂಜನ್, ಬಾಬಾ ಫಕ್ರುದ್ದೀನ್, ಮುನಿಲಕ್ಷ್ಮಮ್ಮ, ಗೀತಾ, ನಂದಿನಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.