ಚಿಕ್ಕಬಳ್ಳಾಪುರ: ‘ಜ್ಞಾನ ಎಂಬುದು ಯಾರ ಸ್ವತ್ತಲ್ಲ. ಅನುಕರಿಸುತ್ತಲೇ ಕಲೆಯುವ ಕಲೆಯೇ ವಿದ್ಯೆ. ಮಕ್ಕಳಲ್ಲಿ ಜ್ಞಾನವೆಂಬ ಶಕ್ತಿ ಹೊರ ಹೊಮ್ಮಬೇಕಾದರೆ ಪೋಷಕರು ಅವರ ಮನಸ್ಸನ್ನು ಅರ್ಥ ಮಾಡಿಕೊಂಡು ಅದಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು' ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಎಂ.ಅರುಟಗಿ ಹೇಳಿದರು.
ನಗರ ಹೊರವಲಯ ಬಿಜಿಎಸ್ ವರ್ಲ್ಡ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ನರ್ಸರಿ ವಿಭಾಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಮಕ್ಕಳು ಬರೀ ಶಾಲೆಯಲ್ಲಿ ಕಲಿತರೇ ಸಾಲದು. ಮನೆಯಲ್ಲಿ ಕೂಡ ಕಲಿಯಬೇಕಾದ್ದದ್ದು ಬಹಳಷ್ಟಿದೆ. ಅದಕ್ಕಾಗಿ ಪೋಷಕರು ಮನೆಯಲ್ಲಿ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಿ ಮಕ್ಕಳ ಜ್ಞಾನಾರ್ಜನೆಗೆ ಒತ್ತು ನೀಡಬೇಕು’ ತಿಳಿಸಿದರು.
‘ವಿದ್ಯಾರ್ಥಿ ಜೀವನ ಎಂಬುದು ನಾಲ್ಕು ಚಕ್ರದ ವಾಹನವಿದ್ದಂತೆ. ಎಲ್ಲ ಚಕ್ರಗಳು ಸುಸ್ಥಿತಿಯಲ್ಲಿದ್ದಾಗ ಮಾತ್ರ ವಾಹನ ಸುಲಭವಾಗಿ ಚಲಿಸಿ ಗುರಿ ಮುಟ್ಟಲು ಸಾಧ್ಯ. ಅದರಂತೆ ಪೋಷಕರು, ಸಮಾಜ, ಶಿಕ್ಷಕರು ಮತ್ತು ಶಾಲೆಯ ಆಡಳಿತ ಮಂಡಳಿ ಎಂಬ ಚಕ್ರಗಳು ಉತ್ತಮ ರೀತಿಯಲ್ಲಿದ್ದರೆ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಶಿಕ್ಷಣದ ವಿಚಾರದಲ್ಲಿ ಆದಿಚುಂಚನಗಿರಿ ಮಠದ ಸೇವಾ ಕಾರ್ಯ ಶ್ಲಾಘನೀಯವಾಗಿದೆ’ ಎಂದರು.
ಏರ್ ವೈಸ್ ಮಾರ್ಷಲ್ ಓ.ಈ.ಎಂ.ಮೆನನ್ ಮಾತನಾಡಿ, ‘ಶಾಲೆಯಲ್ಲಿ ಮಾತ್ರವಲ್ಲದೇ ಮನೆಯಲ್ಲಿ ಕೂಡ ಮಕ್ಕಳಿಗೆ ಕಲಿಕೆಯ ವಾತಾವರಣ ರೂಪಿಸುವುದು ಇಂದಿನ ಅಗತ್ಯವಾಗಿದೆ. ಉತ್ತಮ ಶಾಲೆಯಲ್ಲಿ ಓದಿದ ಮಕ್ಕಳು ಖಂಡಿತ ಉನ್ನತ ಸ್ಥಾನಗಳನ್ನು ಅಲಂಕರಿಸುವುದರಲ್ಲಿ ಸಂಶಯವಿಲ್ಲ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಬಿಜಿಎಸ್ ಸಮೂಹ ಗುಣಮಟ್ಟದ ಶಿಕ್ಷಣಕ್ಕೆ ಬದ್ಧವಾಗಿರುವುದು ಸಂತಸದ ವಿಷಯ’ ಎಂದು ತಿಳಿಸಿದರು.
ಬಿಜಿಎಸ್ ವರ್ಲ್ಡ್ ಶಾಲೆಯ ಪ್ರಾಂಶುಪಾಲ ರಂಜಿತ್ ಕುಮಾರ್ ಮಂಡಲ್, ಉಪ ಪ್ರಾಂಶುಪಾಲ ಗೋಪಾಲಾಚಾರ್, ಮುಖ್ಯ ಶಿಕ್ಷಕ ರಾಜು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.