ಚಿಕ್ಕಬಳ್ಳಾಪುರ: ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಗಳ ಸಾವಿಗೆ ಪ್ರತಿಕಾರವಾಗಿ ತಂದೆ ಆಕೆಯ ಪ್ರಿಯಕರನನ್ನು ಶುಕ್ರವಾರ ರಾತ್ರಿ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಸಮೀಪದ ಯಗವಮದ್ದಲಖಾನೆ ಗ್ರಾಮದ ಹರೀಶ್ (25) ಕೊಲೆಯಾದ ಯುವಕ. ಅದೇ ಗ್ರಾಮದ ಆರೋಪಿಗಳಾದ ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶನನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹರೀಶ್ ಮತ್ತು ವೆಂಕಟೇಶ್ ಪುತ್ರಿ ಶಿರಿಷಾ ಅವರು ಪ್ರೀತಿಸುತ್ತಿದ್ದರು. ವಿಷಯ ತಿಳಿದು ವೆಂಕಟೇಶ್ ಅವರು ಗಲಾಟೆ ಮಾಡಿದ್ದ ವೇಳೆ ಪ್ರೀತಿಯ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು ಎನ್ನಲಾಗಿದೆ.
ಪ್ರೀತಿಗೆ ಪೋಷಕರು ವಿರೋಧಿಸಿದ ಕಾರಣಕ್ಕೆ 10 ತಿಂಗಳ ಹಿಂದೆ ಶಿರಿಷಾ ಅವರು ತಮ್ಮ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಆ ಘಟನೆ ಬಳಿಕ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಹರೀಶ್ ಅವರು ಕೋವಿಡ್ ಕಾರಣಕ್ಕೆ ಇತ್ತೀಚೆಗಷ್ಟೇ ಊರಿಗೆ ವಾಪಾಸಾಗಿದ್ದರು ಎಂದು ತಿಳಿದು ಬಂದಿದೆ.
‘ತನ್ನ ಮಗಳ ಸಾವಿಗೆ ಪ್ರತಿಕಾರವಾಗಿ ಹರೀಶ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ವೆಂಕಟೇಶ್ ಅದಕ್ಕಾಗಿ ಸ್ನೇಹಿತ ಗಣೇಶ್ ಸಹಕಾರ ಪಡೆದಿದ್ದ. ಆರೋಪಿಗಳು ಶುಕ್ರವಾರ ರಾತ್ರಿ 11 ಬೈಕಿನಲ್ಲಿ ಹಿಂಬಾಲಿಸಿ ಚಾಕುವಿನಿಂದ 17 ಬಾರಿ ಇರಿದು ಕೊಲೆ ಮಾಡಿದ್ದಾರೆ. ಮೂರು ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.