ADVERTISEMENT

ಪತ್ನಿಯ ಹಣ ಕದ್ದ ಕುಡುಕ ಪತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಮೇ 2020, 17:20 IST
Last Updated 27 ಮೇ 2020, 17:20 IST

ಬಾಗೇಪಲ್ಲಿ: ಪತ್ನಿ ಖಾತೆಯಲ್ಲಿ ಇದ್ದ ₹3 ಲಕ್ಷವನ್ನು ಫೋನ್ ಪೇ ಮೂಲಕ ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡ ಪತಿಯ ಕೃತ್ಯದ ಬಗ್ಗೆ ಪತ್ನಿಗೆ ತಿಳಿದ ಕಾರಣ ಪತಿ ಬೆಂಕಿ ಹಚ್ಚಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗೂಳೂರು ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಗೂಳೂರು ಗ್ರಾಮದ ಪ್ರಕಾಶ್ (30) ಮೃತ ವ್ಯಕ್ತಿ. ಆಂಧ್ರಪ್ರದೇಶದ ಧರ್ಮಾವರಂನ ಯುವತಿಯೊಂದಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಪ್ರಕಾಶ್ ಮದ್ಯವ್ಯಸನಿಯಾಗಿದ್ದ ಕಾರಣ, ಕುಟುಂಬ ನಿರ್ವಹಣೆಗೆಂದು ತಂದೆ ₹3.5 ಲಕ್ಷ ಮಗಳ ಖಾತೆಗೆ ಜಮಾಯಿಸಿದ್ದರು.

ADVERTISEMENT

ಪತ್ನಿಯ ಖಾತೆಯಲ್ಲಿ ಹಣ ಇರುವುದನ್ನು ತಿಳಿದ ಪ್ರಕಾಶ್ ಫೋನ್ ಪೇ ಮೂಲಕ ಒಂದು ವರ್ಷದಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಬಳಸಿದ್ದಾರೆ.

ಚೀಟಿಗೆ ಕಟ್ಟಲು ₹10 ಸಾವಿರ ಬಿಡಿಸಿಕೊಡುವಂತೆ ತಂದೆ ಮಗಳಗೆ ತಿಳಿಸಿದ್ದರು. ಆಗ ಖಾತೆಯಲ್ಲಿದ್ದ ಹಣ ಬಿಡಿಸಲು ಹೋದಾಗ ಕಡಿಮೆ ಹಣ ಇರುವುದು ಬೆಳಕಿಗೆ ಬಂದಿದೆ. ಈ ವಿಚಾರಕ್ಕೆ ಪತಿ, ಪತ್ನಿ ನಡುವೆ ಜಗಳ ನಡೆದು ಪತ್ನಿ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದರು.

ಇದರಿಂದ ಬೇಸತ್ತ ಪ್ರಕಾಶ್, ಶುಕ್ರವಾರ ಗ್ರಾಮದ ಹೊರವಲಯದ ನೀರು ಇಲ್ಲದ ಬಾವಿಯ ಬಳಿ ಹೋಗಿ ಬೆಂಕಿ ಹಚ್ಚಿಕೊಂಡು, ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳವಾರ ಸ್ಥಳೀಯರು ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಗುರುತಿಸಿ, ಗೂಳೂರು ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.