ADVERTISEMENT

ಚಿಕ್ಕಬಳ್ಳಾಪುರ | ಬಿತ್ತನೆಯೇ ಇಲ್ಲ; ದೊರೆಯಿತು ವಿಮೆ

ಚೇಳೂರು, ಬಾಗೇಪಲ್ಲಿ ತಾಲ್ಲೂಕಿನ ಶೇ 75ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗದ ಶೇಂಗಾ; ಸರ್ಕಾರದ ಮಹತ್ವದ ಆದೇಶ

ಡಿ.ಎಂ.ಕುರ್ಕೆ ಪ್ರಶಾಂತ
Published 2 ಸೆಪ್ಟೆಂಬರ್ 2025, 5:54 IST
Last Updated 2 ಸೆಪ್ಟೆಂಬರ್ 2025, 5:54 IST
ಪಿ.ಎನ್.ರವೀಂದ್ರ
ಪಿ.ಎನ್.ರವೀಂದ್ರ   

ಚಿಕ್ಕಬಳ್ಳಾಪುರ: ಶೇಂಗಾ ಬೆಳೆಯು ಚೇಳೂರು ಮತ್ತು ಬಾಗೇಪಲ್ಲಿ ತಾಲ್ಲೂಕಿನ ಮುಂಗಾರು ಅವಧಿಯ ಪ್ರಮುಖ ಬೆಳೆ. ಆದರೆ ಪ್ರಸಕ್ತ ವರ್ಷ ಮಳೆ ಕೊರತೆ ಕಾರಣ ಈ ಎರಡೂ ತಾಲ್ಲೂಕಿನಲ್ಲಿ ಶೇ 75ರಷ್ಟು ಪ್ರಮಾಣದಲ್ಲಿ ಬಿತ್ತನೆಯೇ ಆಗಿಲ್ಲ. 

ಈ ಕಾರಣದಿಂದ ರಾಜ್ಯ ಸರ್ಕಾರವು ಈಗ ಮಹತ್ವದ ಆದೇಶ ಹೊರಡಿಸಿದೆ. ಎರಡೂ ತಾಲ್ಲೂಕಿನಲ್ಲಿ ಶೇಂಗಾ ಬೆಳೆಗೆ ಸಂಬಂಧಿಸಿದಂತೆ ವಿಮೆ ಹಣ ಪಾವತಿಸಿದ 3,854 ರೈತರಿಗೆ ₹3.21 ಕೋಟಿ ವಿಮಾ ಪರಿಹಾರ ದೊರೆಯಲಿದೆ.

ಪ್ರಸಕ್ತ ಮುಂಗಾರು ಅವಧಿಯಲ್ಲಿ ಕೃಷಿ ಇಲಾಖೆಯು ಬಾಗೇಪಲ್ಲಿ ಮತ್ತು ಚೇಳೂರು ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್ ಶೇಂಗಾ ಬಿತ್ತನೆ ಗುರಿ ಹೊಂದಿತ್ತು. ಆದರೆ ಕೇವಲ 2,500 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ಹೀಗೆ ಶೇ 75ರಷ್ಟು ಬಿತ್ತನೆ ಆಗದ ಕಾರಣ ವಿಮೆ ಹಣವು ರೈತರಿಗೆ ದೊರೆಯುತ್ತಿದೆ. ಬಿತ್ತನೆಯಾಗದ ಕಾರಣ ರೈತರಿಗೆ ವಿಮೆ ಹಣ ದೊರೆಯುತ್ತಿರುವುದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ವಿಮಾ ಕಂತು ಪಾವತಿಸಿರುವ ಶೇಂಗಾ ಬಿತ್ತಿರುವ ಮತ್ತು ಬಿತ್ತನೆ ಮಾಡದಿರುವು ಎಲ್ಲ ರೈತರಿಗೂ ವಿಮೆ ಹಣ ದೊರೆಯುತ್ತಿದೆ. 

ADVERTISEMENT

ಜೂನ್ ಮತ್ತು ಜುಲೈನಲ್ಲಿ ಈ ತಾಲ್ಲೂಕುಗಳಲ್ಲಿ ಶೇಂಗಾ ಬಿತ್ತನೆ ಮಾಡಲಾಗುತ್ತದೆ. ಪ್ರಸಕ್ತ ಮುಂಗಾರಿನಲ್ಲಿ ಈ ಅವಧಿಯಲ್ಲಿ ತೀವ್ರ ಮಳೆ ಕೊರತೆ ಬಾಧಿಸಿತು. ಜುಲೈ ಅಂತ್ಯದೊಳಗೆ ಶೇಂಗಾ ಬಿತ್ತನೆ ಮಾಡಬೇಕಾಗಿತ್ತು. ಮಳೆ ಕೊರತೆಯ ಕಾರಣ ಬಿತ್ತನೆ ಸಾಧ್ಯವಾಗಲಿಲ್ಲ. ಕೆಲವು ರೈತರು ಬಿತ್ತನೆ ಮಾಡಿದ್ದರೂ ಮಳೆ ಬಾರದ ಕಾರಣ ಬೆಳೆ ಚಿಗುರಲಿಲ್ಲ. ಚಿಗುರಿದರೂ ಗಿಡಗಳ ಹಂತದಲ್ಲಿಯೇ ಬೆಳೆ ಹಾಳಾಯಿತು. ಈ ಎಲ್ಲ ಕಾರಣದಿಂದ ಇಲ್ಲಿ ಶೇಂಗಾ ಬಿತ್ತನೆಗೆ ದೊಡ್ಡ ಹೊಡೆತ ಬಿದ್ದಿತು.   

ಶೇಂಗಾ ಬಿತ್ತನೆ ಆಗದಿರುವುದನ್ನು ಮನಗಂಡ ಕೃಷಿ ಇಲಾಖೆ ಮತ್ತು ಜಿಲ್ಲಾಡಳಿತ ಈ ಬಗ್ಗೆ ವಿಮಾ ಕಂಪನಿ ಜೊತೆ ಮಾತುಕತೆ ನಡೆಸಿ ಸರ್ಕಾರಕ್ಕೆ ಮಾಹಿತಿ ನೀಡಿತ್ತು.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಯಾವುದೇ ಒಂದು ತಾಲ್ಲೂಕಿನಲ್ಲಿ ಶೇ 75ರಷ್ಟು ಪ್ರಮಾಣದಲ್ಲಿ ಬಿತ್ತನೆಯೇ ಆಗದಿದ್ದರೆ ವಿಮೆ ಪಡೆಯಲು ಅವಕಾಶವಿದೆ. ಶೇ 75ರಷ್ಟು ಬಿತ್ತನೆಯಾಗದ ಪರಿಣಾಮ ಬೆಳೆ ವಿಮೆಗೆ ಸರ್ಕಾರ ಆದೇಶಿಸಿತ್ತು. ಜೂ.1ರಿಂದ ಜುಲೈ 30ರವರೆಗೆ ಬೆಳೆ ವಿಮೆ ಮಾಡಿಸಲು ಅವಕಾಶ ನೀಡಲಾಗಿತ್ತು. 

ಆ ಪ್ರಕಾರ ಚೇಳೂರು ತಾಲ್ಲೂಕಿನ 2,441 ಮತ್ತು ಬಾಗೇಪಲ್ಲಿ ತಾಲ್ಲೂಕಿನ 1,413 ಸೇರಿದಂತೆ 3,854 ರೈತರು ಬೆಳೆ ವಿಮೆ ಮಾಡಿಸಿದ್ದರು. ರೈತರು ಪ್ರತಿ ಹೆಕ್ಟೇರ್‌ಗೆ ₹ 1,090 ವಂತಿಗೆ ಪಾವತಿಸಿದ್ದರು. ಶೇ 1ರಷ್ಟು ಕೇಂದ್ರ ಮತ್ತು ಶೇ 1ರಷ್ಟು ವಂತಿಕೆಯನ್ನು ರಾಜ್ಯ ಸರ್ಕಾರವು ವಿಮಾ ಕಂಪನಿಗಳಿಗೆ ಪಾವತಿಸಿತ್ತು. ಒಂದು ಹೆಕ್ಟೇರ್‌ಗೆ ವಿಮೆಯ ಮೊತ್ತ ₹54,500 ಆಗಿದೆ. 

ಈಗ ವಿಮೆ ಮೊತ್ತದ ಶೇ 25ರಷ್ಟು ಹಣವನ್ನು ಸರ್ಕಾರ ರೈತರ ಖಾತೆಗಳಿಗೆ ಜಮೆ ಮಾಡಲು ಮುಂದಾಗಿದೆ. ಅಂದರೆ ಒಂದು ಹೆಕ್ಟೇರ್‌ಗೆ ₹ 13,600 ರೈತರ ಖಾತೆಗಳಿಗೆ ಜಮೆ ಆಗಲಿದೆ. ಸೆಪ್ಟೆಂಬರ್ 15ರ ಒಳಗೆ 3,854 ರೈತರಿಗೆ ₹3.21 ಕೋಟಿ ವಿಮೆ ಹಣ ಜಮೆ ಆಗಲಿದೆ.

‘ಸಾಮಾನ್ಯವಾಗಿ ಬೆಳೆ ವಿಮೆ ಹಣವು ಮಾರ್ಚ್, ಏಪ್ರಿಲ್‌ನಲ್ಲಿ ರೈತರಿಗೆ ದೊರೆಯುತ್ತಿತ್ತು. ಆದರೆ ಈಗ ಶೇ 75ರಷ್ಟು ಬೆಳೆಹಾನಿಯಾದ ಕಾರಣ ಮತ್ತು ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಅಂತ್ಯದಲ್ಲಿಯೇ ಬೆಳೆ ವಿಮೆ ಹಣ ದೊರೆಯುತ್ತದೆ’ ಎಂದು ಬಾಗೇಪಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ತಿಳಿಸುವರು.

‘ರೈತರಿಗೆ ಅನುಕೂಲ’:

‘ಬಾಗೇಪಲ್ಲಿ ಮತ್ತು ಚೇಳೂರು ರೈತರು ಮಳೆ ಕೊರತೆಯ ಕಾರಣ ಶೇಂಗಾ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ವಿಮಾ ಕಂಪನಿ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಅವರಿಗೆ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದ್ದೆ’ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ಒಟ್ಟು ವಿಮಾ ಮೊತ್ತದ ಶೇ 25ರಷ್ಟು ಹಣವನ್ನು ಬಿಡುಗಡೆ ಮಾಡಬೇಕು ಎಂದು ಸೂಚಿಸಲಾಯಿತು. ಮಳೆ ಇಲ್ಲದ ಸಮಯದಲ್ಲಿ ಬೆಳೆ ವಿಮೆ ಮಾಡಿಸಿದ್ದರಿಂದ ದೊಡ್ಡ ಸಂಖ್ಯೆಯ ರೈತರಿಗೆ ಅನುಕೂಲವಾಗಿದೆ ಎಂದರು. ಬಿತ್ತನೆ ಮಾಡುವ ಕಾಲದಲ್ಲಿಯೇ ಮಳೆ ಇಲ್ಲದಿದ್ದರೆ ಬಿತ್ತನೆ ಹೇಗೆ ಸಾಧ್ಯ? ಮಳೆ ಕೊರತೆಯಿಂದ ಬಿತ್ತನೆಯಾಗಿಲ್ಲ. ವಿಮೆ ಮಾಡಿಸಿ ಎಂದು ರೈತರಿಗೆ ತಿಳಿಸಿದ್ದೆವು. ವಿಮೆ ಮಾಡಿಸಿದ ಎಲ್ಲ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.