ಚಿಂತಾಮಣಿ: ವಿವಿಧ ಇಲಾಖೆಗಳಿಂದ ಬಡವರಿಗಾಗಿ ರೂಪಿಸಿರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿದರೆ ಮಾತ್ರ ಸರ್ಕಾರಿ ಯೋಜನೆಗಳು ಸಫಲವಾಗುತ್ತವೆ ಎಂದು ಶಾಸಕ ಎಂ. ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.
ತೋಟಗಾರಿಕೆ ಇಲಾಖೆಯು ನಗರ ಹೊರವಲಯದ ಬೂರಗಮಾಕಲಹಳ್ಳಿಯಲ್ಲಿ 2020-21ನೇ ಸಾಲಿನ ವಿವಿಧ ಯೋಜನೆಯ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಮತ್ತು ಜನಸಾಮಾನ್ಯರ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವ ಅಧಿಕಾರಿಗಳ ಪಾತ್ರ ಮುಖ್ಯ. ಸರ್ಕಾರದ ಯೋಜನೆಗಳು ಮತ್ತು ಆಡಳಿತ ಯಶಸ್ವಿಯಾಗುವುದಕ್ಕೂ ಅಥವಾ ವಿಫಲವಾಗುವುದಕ್ಕೂ ಅಧಿಕಾರಿಗಳು ಕಾರಣಕರ್ತರಾಗುತ್ತಾರೆ. ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ಮನುಷ್ಯನಿಗೂ ತಲುಪುವಂತೆ ಸಮರ್ಪಕವಾಗಿ ಕೆಲಸ ಮಾಡಿದರೆ ಮಾತ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದರು.
ಸರ್ಕಾರಿ ಯೋಜನೆಗಳ ಕುರಿತು ವ್ಯಾಪಕ ಪ್ರಚಾರ ನೀಡಬೇಕು. ಯಾವುದೇ ಒತ್ತಡ, ಪ್ರಲೋಭನೆಗೆ ಒಳಗಾಗದೆ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ಸದಾ ಕಚೇರಿ ಸುತ್ತುವವರನ್ನು, ಮಧ್ಯವರ್ತಿಗಳನ್ನು ದೂರವಿಡಬೇಕು. ಅಧಿಕಾರಿಗಳು ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಸೌಲಭ್ಯ ನೀಡಬೇಕು ಎಂದು ಸೂಚಿಸಿದರು.
ಲಾಟರಿ ಪ್ರಕ್ರಿಯೆಯಲ್ಲಿ ಕೃಷಿ ಹೊಂಡ, ಪಾಲಿಹೌಸ್, ಈರುಳ್ಳಿ ಶೇಖರಣ ಘಟಕ, ಪ್ಯಾಕೇಜ್ ಹೌಸ್, ಮಿನಿ ಟ್ರ್ಯಾಕ್ಟರ್, ನೆರಳು ಪರದೆ, ನೀರಿನ ಟ್ಯಾಂಕರ್ಗಳಿಗಾಗಿ ಸಲ್ಲಿಸಿದ್ದ ಅರ್ಜಿಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರಜನಿ, ಅಧಿಕಾರಿಗಳಾದ ಗಂಗುಲಪ್ಪ, ರಾಜೇಶ್ ಹಾಗೂ ರೈತರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.