ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ಜಿಲ್ಲೆಗೆ ಅವಶ್ಯಕತೆ ಇಲ್ಲದ ವೈದ್ಯಕೀಯ ಕಾಲೇಜು ಕನಕಪುರ ತಾಲ್ಲೂಕಿಗೆ ಅಗತ್ಯವಿತ್ತೆ? ರಾಮನಗರ ಜಿಲ್ಲೆಯಲ್ಲಿ ಆರೋಗ್ಯ ವಿಶ್ವವಿದ್ಯಾಲಯವಿದೆ, ವೈದ್ಯಕೀಯ ಕಾಲೇಜುಮಂಜೂರಾಗಿದೆ. ಅಲ್ಲಿಂದ ಕೆಲವೇ ಕಿಲೊಮೀಟರ್ ದೂರದಲ್ಲಿರುವ ಕನಕಪುರಕ್ಕೆ ಅಗತ್ಯವಿತ್ತೆ’ ಎಂದು ಅಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ಇತ್ತೀಚೆಗೆ ನಗರಕ್ಕೆ ಬಂದಿದ್ದ ಕುಮಾರಸ್ವಾಮಿ ಅವರು, ‘ಜಿಲ್ಲೆಯ ವೈದ್ಯಕೀಯ ಕಾಲೇಜಿಗಿಂತಲೂ ಉತ್ತಮ ಆಸ್ಪತ್ರೆಗಳ ಅವಶ್ಯಕತೆ ಇದೆ’ ಎಂದು ಹೇಳಿದ್ದರು. ಬುಧವಾರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಅದಕ್ಕೆ ತಿರುಗೇಟು ನೀಡಿದ ಸುಧಾಕರ್, ‘ಜಿಲ್ಲೆಗೆ ವೈದ್ಯಕೀಯ ಕಾಲೇಜು ಉಪಯೋಗವಿಲ್ಲವಂತೆ. ಹೊರರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಂತೆ. ಮಾಜಿ ಮುಖ್ಯಮಂತ್ರಿಗೆ ಕೊಂಚವಾದರೂ ಲೌಕಿಕ ಜ್ಞಾನವಿದೆ ಎಂದುಕೊಂಡಿದ್ದೆ. ಆದರೆ, ಈ ರೀತಿಯ ಜ್ಞಾನವಿದೆ ಎಂದುಕೊಂಡಿರಲಿಲ್ಲ’ ಎಂದು ಟೀಕಿಸಿದರು.
‘ಕನಕಪುರಕ್ಕೆ ವೈದ್ಯಕೀಯ ಕಾಲೇಜು ಬೇಕಾ ಎಂದು ಕೇಳಿದ್ದಕ್ಕೆ ನಾನು ಕೆಟ್ಟವನಾದೆ. ಜನರಿಗಾಗಿ ನಾನು ಹತ್ತು ಸಾರಿ ರಾಜೀನಾಮೆ ನೀಡಲು, ಕೆಟ್ಟವನು ಎನಿಸಿಕೊಳ್ಳಲು ಸಿದ್ಧ. ನನ್ನ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಜನರಿಗಾಗಿ ಬದುಕುತ್ತೇನೆ. ರಾಜಕಾರಣ ಶಾಶ್ವತವಲ್ಲ. ಜನರ ವಿಶ್ವಾಸ ಶಾಶ್ವತ’ ಎಂದರು.
ನಗರಕ್ಕೆ ಬಂದ ವೇಳೆ ಕುಮಾರಸ್ವಾಮಿ ಅವರು, ‘ಸುಧಾಕರ್ ಅವರು ಚಿಕ್ಕಬಳ್ಳಾಪುರದವರಿಗೆ ಅನುಕೂಲವಾಗಲಿ ಎಂಬುದಕ್ಕಿಂತಲೂ ಹೆಚ್ಚಾಗಿ ಕಮಿಷನ್ ಹೊಡೆಯಲು ವೈದ್ಯಕೀಯ ಕಾಲೇಜು ನಿರ್ಮಿಸಲು ಹೊರಟಿದ್ದಾರೆ. ನಿಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಆ ಕಾಲೇಜಿನಲ್ಲಿ ಸೀಟುಗಳು ದೊರೆಯುತ್ತವೆಯೇ ವಿನಾ ಇಲ್ಲಿನ ರೈತರ ಮಕ್ಕಳಿಗಲ್ಲ’ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.