ಚಿಕ್ಕಬಳ್ಳಾಪುರ: ಜಿಲ್ಲೆಗೆ ಮಂಜೂರಾದ ಸರ್ಕಾರಿ ವೈದ್ಯಕೀಯ ಕಾಲೇಜು ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಬೆಂಬಲಿಗರು ನಗರದಲ್ಲಿ ಬುಧವಾರ ನಡೆಸಿದ ಪ್ರತಿಭಟನೆ ವೇಳೆ, ಶಾಸಕ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ತಮ್ಮ ತಂದೆ ಪಿ.ಎನ್.ಕೇಶವರೆಡ್ಡಿ ಆಡಿರುವ ಮಾತಿಗೆ ಸುಧಾಕರ್ ಅವರು ಟ್ವಿಟರ್ ಮೂಲಕ ಡಿಕೆಶಿ ಕ್ಷಮೆಯಾಚಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಕೇಶವರೆಡ್ಡಿ ಅವರು ಪ್ರತಿಭಟನೆ ವೇಳೆ, 'ಈಗಾಗಲೇ ಡಿ.ಕೆ.ಶಿವಕುಮಾರ್ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೊದಲು ಅವುಗಳಿಂದ ಹೊರಬರಲಿ. ಬಳಿಕ ವೈದ್ಯಕೀಯ ಕಾಲೇಜು ಸ್ಥಾಪಿಸಲಿ' ಎಂದು ಹೇಳಿದ್ದರು.
ಪ್ರತಿಭಟನೆಯಲ್ಲಿ ಭಾಗವಹಿಸದ ಸುಧಾಕರ್ ಅವರಿಗೆ ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ, 'ಇಂದು ನಡೆದ ಪ್ರತಿಭಟನಾ ಮೆರವಣಿಗೆಯ ಸಮಯದಲ್ಲಿ 83 ವರ್ಷ ಪ್ರಾಯದ ನನ್ನ ತಂದೆ ಕೇಶವರೆಡ್ಡಿ ಅವರು ಮಾಹಿತಿ ಕೊರತೆಯಿಂದಾಗಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ನೀಡಿರುವ ಕೆಲ ವೈಯಕ್ತಿಕ ಹೇಳಿಕೆಗಳು ಸಮಂಜಸವಲ್ಲ. ಈ ಹೋರಾಟ ವೈಯಕ್ತಿಕ ಹೋರಾಟವಲ್ಲ ಹಾಗೂ ಈ ಹೇಳಿಕೆಗಳಿಂದ ಶಿವಕುಮಾರ್ ಅವರ ಮನಸ್ಸಿಗೆ ಬೇಸರ ಉಂಟಾಗಿದ್ದರೆ ನಾನೂ ಅವರಲ್ಲಿ ಕ್ಷಮೆಯಾಚಿಸುತ್ತೇನೆ' ಎಂದು ಟ್ವೀಟ್ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.