ಚಿಂತಾಮಣಿ: ತಾಲ್ಲೂಕಿನ ಕೈವಾರ ಗ್ರಾಮದಲ್ಲಿ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಗುರುವಾರ 67ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎನ್.ಎಂ. ಮಂಜುನಾಥ್, ‘ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದರೆ, ಜ್ಞಾನದ ಜತೆಗೆ ಕಲಿತ್ತಿರುವುದನ್ನು ಹೇಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ಕಲಿಯಬಹುದು’ ಎಂದು ಪ್ರತಿಪಾದಿಸಿದರು.
ಕವಿಗಳು, ಲೇಖಕರು, ಹೋರಾಟಗಾರರು, ಕನ್ನಡಾಭಿಮಾನಿಗಳು ಸೇರಿದಂತೆ ಅನೇಕ ಮಹನೀಯರ ಹೋರಾಟದ ಫಲವಾಗಿ ಕರ್ನಾಟಕ ರೂಪುಗೊಂಡಿದೆ. ಕರ್ನಾಟಕಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ. ಹಲವರ ತ್ಯಾಗ, ಬಲಿದಾನದಿಂದ ನಿರ್ಮಾಣವಾಗಿರುವ ಕನ್ನಡ ನಾಡು ಹಾಗೂ ಭಾಷೆಯನ್ನು ಉಳಿಸುವುದರೊಂದಿಗೆ ಬೆಳೆಸಬೇಕಾದ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.
ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೆಂಪರಾಜು ಮಾತನಾಡಿ, ‘ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮತ್ತು ಕನ್ನಡ
ಭಾಷೆಯ ಮೂಲಕ ಬದುಕು ಕಟ್ಟಿಕೊಳ್ಳಬಹುದಾದ ಮಾರ್ಗ ತೋರಿಸುವುದೇ ಇದರ ಉದ್ದೇಶವಾಗಿದೆ’ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ, ಪುರಸ್ಕಾರ ವಿತರಿಸಲಾಯಿತು.
ತಹಶೀಲ್ದಾರ್ ಮುನಿಶಾಮಿರೆಡ್ಡಿ, ಐ.ಆರ್.ಟಿ.ಎಸ್ ಮುಖ್ಯ ಸುರಕ್ಷತಾ ಅಧಿಕಾರಿ ಕೆ.ವಿ. ಗೋಪಿನಾಥ್, ಐಡಿಎಎಸ್ ನ ಸಹಾಯಕ ಕಂಟ್ರೋಲರ್ ಬಿ.ಎನ್. ಅಬಿಷೇಕ್, ಕೃಷಿ ವಿವಿಯ ಡಾ. ಮೋಹಿತ್ ಕುಮಾರ್, ಡಾ. ವೀಣಾ, ಜಿ.ಎನ್. ಅಮರನಾಥಗುಪ್ತ, ಡಾ. ಶ್ರೀನಿವಾಸ್, ಕೈವಾರ ಗ್ರಾಪಂ ಉಪಾಧ್ಯಕ್ಷೆ ಉಮಾದೇವಿ, ಕೈವಾರ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಡಿ.ಆರ್. ನಾಗರಾಜ್, ಕಾರ್ಯದರ್ಶಿ ಆಟೊ ರಾಮಣ್ಣ, ಸಂಘಟನಾ ಕಾರ್ಯದರ್ಶಿ ಬಿ.ವಿ. ಅಮರನಾಥ್, ಖಜಾಂಚಿ ವೆಂಕಟರವಣಪ್ಪ, ಉಪನ್ಯಾಸಕ ಯರಮರೆಡ್ಡಿಹಳ್ಳಿ ವೆಂಕಟರವಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.