ಚಿಂತಾಮಣಿ: ತಾಲ್ಲೂಕಿನ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ ನ. 22ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 4ಗಂಟೆವರೆಗೆ ಮೈಲಾಂಡ್ಲಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಚುನಾವಣೆ ನಡೆಯಲಿದೆ.
ಸಂಘದ ಆಡಳಿತ ಮಂಡಳಿಯ ಒಟ್ಟು ಸ್ಥಾನಗಳು 13. ಈ ಪೈಕಿ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನ, ಠೇವಣಿದಾರರ ಕ್ಷೇತ್ರದಿಂದ 1, ಸಾಲಗಾರರ ಕ್ಷೇತ್ರದಿಂದ 10 ಸ್ಥಾನಗಳಿವೆ. ಸಾಮಾನ್ಯ ವರ್ಗಕ್ಕೆ 4, ಪರಿಶಿಷ್ಟ ಜಾತಿಗೆ 1, ಪರಿಶಿಷ್ಟ ಪಂಗಡಕ್ಕೆ 1, ಹಿಂದುಳಿದ ವರ್ಗ(ಎ) 1, ಹಿಂದುಳಿದ ವರ್ಗ(ಬ) 1, ಮಹಿಳೆಯರಿಗೆ 2 ಸ್ಥಾನ ಮೀಸಲಿಡಲಾಗಿದೆ.
ಸಾಲಗಾರರ ಕ್ಷೇತ್ರದಲ್ಲಿ 1299 ಮತದಾರರು, ಸಾಲಗಾರರಲ್ಲದ ಕ್ಷೇತ್ರದಲ್ಲಿ 2468, ಠೇವಣಿದಾರರ ಕ್ಷೇತ್ರದಲ್ಲಿ 36 ಮತದಾರರಿದ್ದಾರೆ. ನಾಮಪತ್ರ ಸಲ್ಲಿಕೆಗೆ ಭಾನುವಾರ ಕೊನೆಯ ದಿನಾಂಕವಾಗಿತ್ತು. ನಾಮಪತ್ರ ವಾಪಸ್ ಪಡೆಯಲು ನ. 16 ಅಂತಿಮ ದಿನವಾಗಿದೆ. ಚಿನ್ನೆಗಳೊಂದಿಗೆ ಉಮೇದುವಾರರ ಪಟ್ಟಿ ಪ್ರಕಟಣೆಯು ನ. 17ರಂದು ನಡೆಯಲಿದೆ. ಅಗತ್ಯವಿದ್ದರೆ ನ. 22ರಂದು ಮತದಾನ ನಡೆಯಲಿದೆ. ಅದೇ ದಿನ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ ಮಾಡಲಾಗುತ್ತದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.