ADVERTISEMENT

ಪ್ರತಿ 40 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆ

ಗುಡಿಬಂಡೆ: ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮದಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 1:32 IST
Last Updated 12 ಸೆಪ್ಟೆಂಬರ್ 2020, 1:32 IST
ಗುಡಿಬಂಡೆ ಪಟ್ಟಣದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಆಚರಿಸಲಾಯಿತು
ಗುಡಿಬಂಡೆ ಪಟ್ಟಣದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಆಚರಿಸಲಾಯಿತು   

ಗುಡಿಬಂಡೆ: ಪಟ್ಟಣದಲ್ಲಿ ಆರೋಗ್ಯ ಇಲಾಖೆಯಿಂದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ಇತ್ತಿಚಿನ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಪ್ರತಿ 40 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ಆತ್ಮಹತ್ಯೆ ಪ್ರಕರಣಗಳಲ್ಲಿ 21ನೇ ಸ್ಥಾನದಲ್ಲಿದೆ. ಬಹುತೇಕ ಆತ್ಮಹತ್ಯೆಗೆ ಒತ್ತಡವೇ ಪ್ರಮುಖ ಕಾರಣ ಎಂಬುದು ಹಲವು ವರದಿಗಳ ಮೂಲಕ ತಿಳಿದು ಬಂದಿದೆ ಎಂದು ಹೇಳಿದರು.

‘ಕೆಲಸ, ಜೀವನ, ಸಂಬಂಧಗಳಲ್ಲಿನ ಹೊಂದಾಣಿಕೆ, ಕ್ಷುಲ್ಲಕ ವಿಷಯಗಳು ಒತ್ತಡಕ್ಕೆ ಕಾರಣವಾಗುತ್ತವೆ. ಆದರೆ, ಒತ್ತಡಕ್ಕೆ ಒಳಗಾದ ವ್ಯಕ್ತಿ ಅದರಿಂದ ಮುಕ್ತಿ ಪಡೆಯಲು ಆತ್ಮಹತ್ಯೆಯ ದಾರಿ ತುಳಿಯುವುದು ತಪ್ಪು ಕಲ್ಪನೆ’ ಎಂದು ತಿಳಿಸಿದರು.

ADVERTISEMENT

ತಹಶೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ಆತ್ಮಹತ್ಯೆ ಮಹಾಪಾಪ. ಯುವಜನತೆ ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ನೋವಿನ
ಸಂಗತಿ. ಪರೀಕ್ಷೆಗಳಲ್ಲಿ ಅನುತ್ತೀರ್ಣರಾದರೇ, ಮನೆಯಲ್ಲಿ ಪೋಷಕರು ಬೈದರೆ, ಅಂದುಕೊಂಡಿದ್ದು ಆಗಲಿಲ್ಲ ಎಂಬ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಮುಂದಾಗುತ್ತಾರೆ
ಎಂದರು.

ಆತ್ಮಹತ್ಯೆ ಯೋಚನೆಯುಳ್ಳ ಪ್ರತಿಯೊಬ್ಬರೂ ಮುಂಚಿತವಾಗೇ ಕುರುಹು ನೀಡುತ್ತಾರೆ. ಅಂತಹವರನ್ನು ಗುರುತಿಸುವುದರಿಂದ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ಖಿನ್ನತೆಗೆ ಒಳಗಾಗಿರುವವರನ್ನು ಗುರುತಿಸಿ ಸಾಂತ್ವನ ಹೇಳಿ ಮನಸ್ಥಿತಿ ಬದಲಾಯಿಸಲು ಯತ್ನಿಸಬೇಕು ಎಂದು ಸಲಹೆ ನೀಡಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜಶೇಖರ್, ಸಿಡಿಪಿಒ ವೆಂಕಟೇಗೌಡ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.