ಚಿಂತಾಮಣಿ: ಪ್ರತಿಯೊಬ್ಬ ರೈತರು ಪ್ರತಿವರ್ಷ ಬೆಳೆ ವಿಮೆ ಮಾಡಿಸುವ ಪದ್ಧತಿ ರೂಢಿಸಿಕೊಳ್ಳಬೇಕು. ಬೆಳೆ ಹಾನಿಯಾದಾಗ ಕನಿಷ್ಠ ಬಂಡವಾಳವಾದರೂ ಸಿಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅಮರನಾರಾಯಣರೆಡ್ಡಿ ಸಲಹೆ ನೀಡಿದರು.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ತಾಲ್ಲೂಕು ಕೃಷಿಕ ಸಮಾಜ ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ವಿತರಣೆಯಾದ ಬಿತ್ತನೆ ಬೀಜ (ತೊಗರಿ/ಅಲಸಂದಿ/ನೆಲಗಡಲೆ) ಹಾಗೂ ಸಿರಿಧಾನ್ಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಘ್.ಎನ್.ಎಸ್ ಯೋಜನೆಯಡಿ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿದೆ. ಪಿ.ಎಂ ಕಿಸಾನ್ ಯೋಜನೆಯಡಿ ರೈತರಿಗೆ ₹6,000 ಹಾಗೂ ರೈತ ಬೆಳೆ ಸಮೀಕ್ಷೆ ಯೋಜನೆ, ಕೃಷಿ ಯಾಂತ್ರೀಕರಣ, ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಯೋಜನೆಯಡಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಘಟಕಗಳಿಗೆ ಶೇ 90ರ ಸಹಾಯಧನದ ಸೌಲಭ್ಯವಿದೆ ಎಂದರು.
ಸಾಲಭಾದೆಯಿಂದ ಮೃತಪಟ್ಟ ರೈತರ ಕುಟುಂಬದವರು ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿದರೆ ₹5ಲಕ್ಷ ಹಾಗೂ ಆಕಸ್ಮಿಕ ಮರಣಕ್ಕೆ ತುತ್ತಾದವರಿಗೆ ₹2 ಲಕ್ಷ ಸರ್ಕಾರದಿಂದ ನೀಡಲಾಗುವುದು ಎಂದು ತಿಳಿಸಿದರು.
ಸಹಾಯಕ ತೋಟಗಾರಿಕೆ ನಿರ್ದೇಶಕ ಬಾಲಕೃಷ್ಣ ಮಾತನಾಡಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಪಾಲಿಹೌಸ್, ಶೇಡ್ ನೆಟ್, ಪ್ಯಾಕ್ ಹೌಸ್ ಈರುಳ್ಳಿ ಶೇಖರಣ ಘಟಕಕ್ಕೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಲಾಟರಿ ಮುಂಖಾತರ ಆಯ್ಕೆ ಮಾಡಿ ಶೇ50ರಷ್ಷು ಸಹಾಯಧನ ನೀಡಲಾಗುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ವಿತರಿಸಲಾಗುತ್ತಿದೆ. 3-5 ಎಚ್ಪಿ ಪಂಪ್ ಸೆಟ್ಗೆ ₹1ಲಕ್ಷ, 5ಕ್ಕಿಂತ ಹೆಚ್ಚು ಎಚ್ಪಿ ಪಂಪ್ ಸೆಟ್ಗಳಿಗೆ ₹1.5ಲಕ್ಷ (ಶೇ50ರಷ್ಷು ಸಹಾಯಧನ) ಹಾಗೂ ಜೇನು ಪೆಟ್ಟಿಗೆ ಶೇ75ರಷ್ಷು ಸಹಾಯಧನದಲ್ಲಿ ಪ್ರತಿ ರೈತನಿಗೆ ಸುಮಾರು 10 ಪೆಟ್ಟಿಗೆ ನೀಡಲಾಗುವುದು ಎಂದು ತಿಳಿಸಿದರು.
ಹಿರಿಯ ಸದಸ್ಯ ಪಟೇಲ್ ಅಶ್ವತ್ಧನಾರಾಯಣರೆಡ್ಡಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಯರಾಮರೆಡ್ಡಿ, ಉಪಾಧ್ಯಕ್ಷ ಎನ್.ವಿ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಸಿ.ವೆಂಕಟರೆಡ್ಡಿ, ಜಿಲ್ಲಾ ಪ್ರತಿನಿಧಿ ನಂಜುಂಡಗೌಡ ಹಾಗೂ ಸದಸ್ಯರು, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ರಜನಿ, ರೇಷ್ಮೆ ಸಹಾಯಕ ನಿರ್ದೇಶಕ ಆಂಜನೇಯರೆಡ್ಡಿ, ಪಶುಸಂಗೋಪನೆ ಸಹಾಯಕ ನಿರ್ದೇಶಕ ಚನ್ನಕೇಶವರೆಡ್ಡಿ, ಕೃಷಿ ಅಧಿಕಾರಿಗಳು ಹಾಗೂ ಇಲಾಖೆ ಇತರೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.