ಗೌರಿಬಿದನೂರು: ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ರದ್ದಾಗಬೇಕು. ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಮಾಡದೆ ಉಚಿತ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಮಂಗಳವಾರ ತಾಲ್ಲೂಕು ಕಚೇರಿಯ ಮುಂಭಾಗ ಪ್ರತಿಭಟನೆನಡೆಸಿದರು.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ವಿ.ಲೋಕೇಶ್ ಗೌಡ ಮಾತನಾಡಿ, 2005ರಲ್ಲಿ ಒಡಿಶಾ ರಾಜ್ಯದಲ್ಲಿ ವಿದೇಶಿ ಖಾಸಗಿ ಕಂಪನಿಗಳಿಗೆ ವಿದ್ಯುತ್ ಒಡೆತನ ವಹಿಸಿತ್ತು. ಬಳಿಕ ಒಂದೇ ವರ್ಷದಲ್ಲಿ ಆ ಖಾಸಗಿ ಕಂಪನಿಯು ನಿರ್ವಹಣೆಯ ಮಾಡಲು
ಸಾಧ್ಯವಾಗದೆ ರಾಜ್ಯದಿಂದ ಪಲಾಯನಗೊಂಡಿತ್ತು. ಆ ರಾಜ್ಯದ ರೈತರು ಮತ್ತು ಜನರುತೀವ್ರ ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗಿತ್ತುಎಂದರು.
ಖಾಸಗಿ ಕಂಪನಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ಖಾಸಗಿ ಕಂಪನಿಗಳು ಬಂದರೆ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಮಾಡುವುದು, ಕೃಷಿಗೆ ಉಚಿತ ಸೌಲಭ್ಯಗಳನ್ನು ನಿಲ್ಲಿಸುವ ಹುನ್ನಾರ ಖಾಸಗಿ ವಲಯಗಳಲ್ಲಿ ನಡೆಯುತ್ತಿದೆ. ವಿದ್ಯುತ್ ಖಾಸಗೀಕರಣ ಮಾಡುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರು ತಹಶೀಲ್ದಾರ್ ಎಚ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಮುದ್ದುರಂಗಪ್ಪ, ಸನತ್ ಕುಮಾರ್, ನರಸಿಂಹಮೂರ್ತಿ, ರಾಮಚಂದ್ರರೆಡ್ಡಿ, ಬಾಬು, ವೆಂಕಟೇಶ್, ನರಸರೆಡ್ಡಿ, ಅಶ್ವತ್ಥಗೌಡ, ಶ್ರೀನಿವಾಸ್, ಆದಿನಾರಾಯಣಪ್ಪ, ಸುರೇಶ್ ರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.