ADVERTISEMENT

ಚಿಕ್ಕಬಳ್ಳಾಪುರ: ಕೋಡಿಹಳ್ಳಿ ವಿರುದ್ಧ ರೈತರ ಆಕ್ರೋಶ

ಆರೋಪ ಮುಕ್ತರಾದ ಬಳಿಕ ಹಸಿರು ಶಾಲು ಧರಿಸಲಿ: ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:36 IST
Last Updated 29 ಮೇ 2022, 4:36 IST

ಚಿಕ್ಕಬಳ್ಳಾಪುರ: ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಅವರು ಆರೋಪ ಮುಕ್ತರಾದ ನಂತರ ಹಸಿರು ಶಾಲು ಬಳಸಬೇಕು. ಅಲ್ಲಿಯವರೆಗೆ ಅವರು ಹಸಿರು ಶಾಲು ಬಳಸುವುದನ್ನು ವಿರೋಧಿಸಲಾಗುವುದು ಎಂದು ರೈತ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಚೇನಹಳ್ಳಿ ಎಂ.ಆರ್. ಲಕ್ಷ್ಮಿನಾರಾಯಣ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌ರೈತರ ಜೀತನ ಹಸಿರುಮಯವಾಗಲಿ ಎಂದು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರು ರೈತ ಸಂಘವನ್ನು ಸ್ಥಾಪಿಸಿದರು. ಜನಾರ್ದನ ರೆಡ್ಡಿ ಜೈಲಿನಲ್ಲಿ ಇದ್ದಾಗ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಭೇಟಿ ಆಗಿದ್ದರು. ಆಗಲೇ ಈತನ ನಾಯಕತ್ವ ನಮಗೆ ಬೇಡ ಎಂದು ನಾವು ಇವರ ಸಂಘದಿಂದ ಹೊರಗೆ ಬಂದೆವು. ರೈತರ ಹೋರಾಟಗಳಿಗೆ ತಣ್ಣೀರು ಎರಚುವ ವ್ಯಕ್ತಿ ಕೋಡಿಹಳ್ಳಿ ಚಂದ್ರಶೇಖರ್ ಎಂದು ದೂರಿದರು.

ಹಣಕ್ಕಾಗಿ ಮತ್ತು ವೈಯಕ್ತಿಕ ಸಾಧನೆಗಾಗಿ ರೈತ ಸಂಘ ಹೋರಾಟ ಮಾಡುವುದಿಲ್ಲ. ಇಂತಹವರಿಂದ ಸಂಘಕ್ಕೆ ಮಸಿ ಬಳಿಯುವ ಕೆಲಸ ಆಗುತ್ತಿದೆ. ಚಂದ್ರಶೇಖರ್ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ADVERTISEMENT

₹ 2 ಸಾವಿರ ಕೋಟಿ ನೀಡಿದರೆಕೃಷಿ ಕಾಯ್ದೆಗಳನ್ನು ವಿರೋಧಿಸಿ ನವದೆಹಲಿಯಲ್ಲಿ ನಡೆದ ಹೋರಾಟ ಸ್ಥಗಿತಗೊಳಿಸುವುದಾಗಿ ಕೋಡಿಹಳ್ಳಿ ಹೇಳಿದ್ದಾರೆ. ಈ ವಿಚಾರಗಳ ಬಗ್ಗೆ ಚರ್ಚಿಸಲುಬೆಂಗಳೂರಿನ ಗಾಂಧಿ ಭವನದಲ್ಲಿ ಸೋಮವಾರ ರೈತ ಮುಖಂಡರ ಸಭೆ ನಡೆಯಲಿದೆ. ರಾಕೇಶ್ ಟಿಕಾಯತ್ ಸಹ ಸಭೆಯಲ್ಲಿ ಪಾಲ್ಗೊಳ್ಳುವರು ಎಂದರು. ‌

ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಚಂದ್ರಶೇಖರ್‌ಗೆ ‘ಡೀಲ್ ರಾಜ’ ಎಂಬ ಹೆಸರೇ ಇದೆ. ಇವರ ಸಿಎಂಎನ್ ಸಂಸ್ಥೆಯ ಹಣಕಾಸು ವಹಿವಾಟಿನ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಗೌರಿಬಿದನೂರು ತಾಲ್ಲೂಕು ಅಧ್ಯಕ್ಷಲೋಕೇಶ್‌ಗೌಡ ಮಾತನಾಡಿ, ರೈತ ಹೋರಾಟಗಾರರು ಹಳ್ಳಿಗಳಲ್ಲಿ ದುಡಿಮೆ ಮಾಡುವವರಾಗಿದ್ದಾರೆ. ಆದರೆ, ಕೋಡಿಹಳ್ಳಿ ಚಂದ್ರಶೇಖರ್ ಬೆಂಗಳೂರಿನಲ್ಲಿದ್ದು ಹೋರಾಟ ನಡೆಸುವರು. ಇವರದ್ದು ಹೈಟೆಕ್ ಡೀಲ್ ಎಂದು ವ್ಯಂಗ್ಯವಾಡಿದರು.

ರೈತ ಸಂಘದ ವಿವಿಧ ತಾಲ್ಲೂಕು ಘಟಕದ ಅಧ್ಯಕ್ಷರಾದದೊಡ್ಡಮರಳಿ ಸಂಪತ್ ಕುಮಾರ್,ವರದ ರಾಜು,ದೊಡ್ಡತೇಕಹಳ್ಳಿ ಆಂಜಿನಪ್ಪ, ಕದಿರೇಗೌಡ, ಮಾಜಿ ಯೋಧ ಶಿವಾನಂದರೆಡ್ಡಿ, ಮುಖಂಡ ರಾದ ಶಿವರಾಜು, ಡಿ.ವಿ. ನಾರಾಯಣಸ್ವಾಮಿ, ಅತ್ತಿಗಾನಹಳ್ಳಿ ಮುನೇಗೌಡ, ಚಿಕ್ಕಪಾಪನಹಳ್ಳಿ ವೆಂಕಟರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.