ಗುಡಿಬಂಡೆ: ತಾಲ್ಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿಯ ಹಳೇ ಗುಡಿಬಂಡೆ ಗ್ರಾಮದ ರಸ್ತೆ ಒತ್ತುವರಿ ತೆರವು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಮತ್ತೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಎಚ್.ಪಿ. ರಾಮನಾಥ್ ಮಾತನಾಡಿ, ‘ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ರಸ್ತೆ ಒತ್ತುವರಿ ತೆರವು, ಸ್ವಚ್ಛತೆ, ಇ-ಖಾತೆ ಸೇರಿದಂತೆ ವಿವಿಧ ಕೆಲಸ ಮಾಡಿಕೊಡುವಲ್ಲಿ ವಿಫಲವಾದ ಪಿಡಿಒ ಅರ್ಚನಾ ವಿರುದ್ಧ ಉನ್ನತಾಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲಿಲ್ಲ. ಹಾಗಾಗಿ, ತಾಲ್ಲೂಕು ಪಂಚಾಯಿತಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.
ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ರವೀಂದ್ರ ಭೇಟಿ ನೀಡಿ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ‘ರಸ್ತೆ ಅತಿಕ್ರಮಿಸಿಕೊಂಡವರಿಗೆ ತಿಳಿವಳಿಕೆ ಪತ್ರ ನೀಡಲಾಗುತ್ತಿದೆ. ಇದೇ 19ರೊಳಗೆ ಅವರೇ ಒತ್ತುವರಿ ಜಾಗ ತೆರವುಗೊಳಿಸದಿದ್ದರೆ ಪಂಚಾಯಿತಿ ಯಿಂದ ತೆರವು ಮಾಡಲಾಗುವುದು’ ಎಂದು ಭರವಸೆ ನೀಡಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮುರಳಿ, ಮುಖಂಡರಾದ ಸೋಮು, ರಾಜಪ್ಪ, ವೆಂಕಟರಮಣಪ್ಪ, ಮೂರ್ತಿ, ಶ್ರೀನಿವಾಸ, ಕುಮಾರ್, ಕೃಷ್ಣಾರೆಡ್ಡಿ, ಶಿವಶಂಕರ, ಬಂದಾರಹಳ್ಳಿ ಶ್ರೀನಿವಾಸ, ಜಯಪ್ಪ, ನರೇಂದ್ರ, ರವಿ, ಚೌಡರೆಡ್ಡಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.