ಗೌರಿಬಿದನೂರು: ಉತ್ತರ ಪಿನಾಕಿನಿ ನದಿಯಲ್ಲಿ ವಿಷಯುಕ್ತ ರಾಸಾಯನಿಕ ಬೆರೆತು ಸಾವಿರಾರು ಮೀನುಗಳು ಸಾವನ್ನಪ್ಪಿವೆ.
ನಗರದ ವೀರ್ಲಗೊಲ್ಲಹಳ್ಳಿ ಬಳಿಯ ಮರಳೂರು ಕಾಲುವೆ ಮತ್ತು ಬೈಪಾಸ್ ರಸ್ತೆ ಬಳಿ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ಮೇಲ್ಸೇತುವೆ ಕೆಳಗೆ ರಾಸಾಯನಿಕ ಬೆರೆತು ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಸ್ಥಳದಲ್ಲಿ ರಾಸಾಯನಿಕದ ದುರ್ನಾತ ಬೀರುತ್ತಿರುವುದನ್ನು ಸ್ಥಳೀಯ ರೈತರು ಭಾನುವಾರ ಬೆಳಗ್ಗೆ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಾರ್ಖಾನೆಗಳ ವಿಲೇವಾರಿ ಮಾಡುವ ರಾಸಾಯನಿಕವನ್ನು ರಾತ್ರಿವೇಳೆ ನದಿಗೆ ಹರಿಸಲಾಗಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು. ಎಚ್.ಎನ್ ವ್ಯಾಲಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ನೀರಿನ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ‘ಉತ್ತರ ಪಿನಾಕಿನಿ ನದಿಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮಕ್ಕೆ, ಎಚ್.ಎನ್ ವ್ಯಾಲಿಯ ಸಂಸ್ಕರಿತ ನೀರಿನ ಪರಿಣಾಮವೇ ಅಥವಾ ಕಾರ್ಖಾನೆಗಳ ವಿಲೇವಾರಿ ಮಾಡುವ ರಾಸಾಯನಿಕಗಳಿಂದ ಉಂಟಾಗಿದೆಯೇ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಎಚ್.ಎನ್ ವ್ಯಾಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಉತ್ತರ ಪಿನಾಕಿನಿ ನದಿ ನೀರು ಮರಳೂರು ಕಾಲುವೆ ಮೂಲಕ ಮರಳೂರು ಕೆರೆ ಸೇರುತ್ತದೆ. ಇದೆ ನೀರು ಭೂಮಿಯಲ್ಲಿ ಇಂಗಿ ಕೊಳವೆ ಬಾವಿಗಳ ಮೂಲಕ ಮನುಷ್ಯನ ದೇಹ ಸೇರುತ್ತದೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.
ರೈತ ಗೋಪಿ, ನಂದನ್, ಶ್ರೀಕಾಂತ್, ನಾರಾಯಣಪ್ಪ, ಮೋಹನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.