ಶಿಡ್ಲಘಟ್ಟ: ಪಲಿಚೇರ್ಲು-ಕನ್ನಪ್ಪನಹಳ್ಳಿ ಬಳಿಯ ಗೋಮಾಳದ ಹಳ್ಳದಲ್ಲಿ ನೀರು ಕುಡಿಯಲು ತೆರಳಿದ ಮೇಕೆ ಮೇಲೆ ಚಿರತೆ ದಾಳಿ ನಡೆಸಿದೆ ಎನ್ನಲಾದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಂಗಳವಾರ ಪರಿಶೀಲಿಸಿದರು. ಸ್ಥಳೀಯರಿಂದ ಅಗತ್ಯ ಮಾಹಿತಿ ಪಡೆದರು.
ವಲಯ ಅರಣ್ಯ ಅಧಿಕಾರಿ ರಾಜೇಶ್ ಗವಾಲ್ ಹಾಗೂ ತಂಡ ಚಿರತೆ ಕಾಣಿಸಿಕೊಂಡಿತು ಎನ್ನಲಾದ ಸ್ಥಳಕ್ಕೆ ಭೇಟಿ ನೀಡಿ ಹೆಜ್ಜೆ ಗುರುತು ಪರಿಶೀಲಿಸಿದರು. ದಾಳಿಗೆ ಒಳಗಾಗಿದ್ದ ಮೇಕೆಯನ್ನು ವೀಕ್ಷಿಸಿದರು. ಮೇಕೆ ಚೇತರಿಸಿಕೊಂಡಿದ್ದು ಆರೋಗ್ಯವಾಗಿದ್ದು ಎಂದಿನಂತೆ ಮೇವು ನೀರು ಸೇವಿಸಿದೆ.
ಪಲಿಚೇರ್ಲು, ಕನ್ನಪ್ಪನಹಳ್ಳಿಯ ಗ್ರಾಮದಲ್ಲಿ ಸುತ್ತಾಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಇತ್ತೀಚಿನ ದಿನಗಳಲ್ಲಿ ಸಾಕು ನಾಯಿ, ಬೀದಿ ನಾಯಿಗಳ ಸಂಖ್ಯೆಯಲ್ಲಿ ಏರಿಳಿತ, ನಾಪತ್ತೆ ಆಗಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.
ಮೇಕೆ ಕುರಿಗಳನ್ನು ಬಯಲಿಗೆ ಕರೆದೊಯ್ದಿದ್ದ ದ್ಯಾವಪ್ಪ ಮತ್ತು ಚಿರತೆ ನೋಡಿದ್ದೆ ಎಂದಿದ್ದ ದೇವೇಂದ್ರಪ್ಪ ಅವರನ್ನು ಭೇಟಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚರ್ಚಿಸಿದರು.
ಪಲಿಚೇರ್ಲು ಗ್ರಾಮ ಪಂಚಾಯಿತಿಯ ಪಿಡಿಒ ಅವರೊಂದಿಗೂ ಚರ್ಚಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.