ಗೌರಿಬಿದನೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಬೈಕ್ ಕಳ್ಳರನ್ನು ಗೌರಿಬಿದನೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹ 11.5 ಲಕ್ಷ ಮೌಲ್ಯದ 23 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ಮಂದಿ ಆರೋಪಿಗಳು ಆಂಧ್ರಪ್ರದೇಶದ ಹಿಂದೂಪುರದವರಾಗಿದ್ದಾರೆ.
ಜು.29ರಂದು ಗೌರಿಬಿದನೂರಿನ ಯಶಸ್ವಿನಿ ಕಾಲೇಜು ಮುಂಭಾಗ ಅಬ್ದುಲ್ ಖಾದರ್ ಎಂಬುವವರ ಬೈಕ್ ನಿಲ್ಲಿಸಿದ್ದು ಇವರ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದರು. ಎಚ್ಡಿಎಫ್ಸಿ ಬ್ಯಾಂಕ್ ಮುಂಭಾಗದ ವಾಹನ ನಿಲುಗಡೆ ಪ್ರದೇಶದಲ್ಲಿದ್ದ ಆರೋಪಿಗಳಾದ ಎಸ್.ನವೀದ್, ಎಸ್.ಅಲೀಮುಲ್ಲಾ, ಶಹಬಾಜ್ ಅವರನ್ನು ಬಂಧಿಸಿದ್ದರು.
ಈ ಮೂವರು ಆರೋಪಿಗಳಿಂದ ಪೊಲೀಸರು ₹ 8.5 ಲಕ್ಷ ಮೌಲ್ಯದ 15 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಹಿಂದೂಪುರ, ಗೌರಿಬಿದನೂರು ಮತ್ತು ಪಾವಗಡದಲ್ಲಿ ಬೈಕ್ಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.
ಮತ್ತೊಬ್ಬ ಬಂಧನ: ಗೌರಿಬಿದನೂರಿನ ವೆಂಕಟೇಶ ಬಾಬು ಅವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಗೌರಿಬಿದನೂರು ಆಸ್ಪತ್ರೆಯ ಮುಂಭಾಗದಲ್ಲಿದ್ದ ಆರೋಪಿ ಶೇಕ್ ಗೌಸ್ ಮದೀನ್ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ ₹ 3 ಲಕ್ಷ ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಕ್ಕೆ
ಪಡೆಯಲಾಗಿದೆ.
ಗೌರಿಬಿದನೂರು ಸಿಪಿಐ ಸತ್ಯನಾರಾಯಣ್ ನೇತೃತ್ವದಲ್ಲಿ ಪಿಎಸ್ಐ ಚಂದ್ರಕಲಾ, ಸಿಬ್ಬಂದಿ ರಾಮಯ್ಯ, ರಿಜ್ವಾನ್, ಅಶ್ವತ್ಥ, ಶಿವಶೇಖರ್, ಸುಬ್ರಹ್ಮಣ್ಯ, ಮಂಜುನಾಥ್, ವಿನಯ್ ಕುಮಾರ್, ದೇವರಾಜ್, ಪ್ರಕಾಶ್ ತಗ್ಗಳ್ಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳನ್ನು ಬಂಧಿಸಿದ ಸಿಬ್ಬಂದಿಯನ್ನು ಎಸ್ಪಿ ಡಿ.ಎಲ್.ನಾಗೇಶ್ ಮತ್ತು ಡಿವೈಎಸ್ಪಿ ವಾಸುದೇವ್
ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.