ADVERTISEMENT

‘ಬಡವರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 4:25 IST
Last Updated 12 ಜುಲೈ 2021, 4:25 IST
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾಲೋಚನಾ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ ವಿತರಿಸಲಾಯಿತು
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾಲೋಚನಾ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ ವಿತರಿಸಲಾಯಿತು   

ಶಿಡ್ಲಘಟ್ಟ: ಬಡವರು, ನೊಂದವರ ಮಕ್ಕಳ ಮತ್ತು ದಿವ್ಯಾಂಗ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕಾದ ಅಗತ್ಯವಿದೆ. ಸರ್ಕಾರದ ಸವಲತ್ತುಗಳ ಜೊತೆಗೆ ಸ್ವಯಂಸೇವಾ ಸಂಘ ಸಂಸ್ಥೆಗಳು ಅಂಗವಿಕಲರ ಶೈಕ್ಷಣಿಕಾಭಿವೃದ್ಧಿಗೆ ಸಹಕಾರ ನೀಡಬೇಕಿದೆ ಎಂದು ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ. ಉಮೇಶ್ ತಿಳಿಸಿದರು.

ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದ ಸಮುದಾಯ ಭವನದಲ್ಲಿ ವಿಜಯಪುರದ ಡಾ.ಶ್ರೀಶಿವಕುಮಾರ ಮಹಾಸ್ವಾಮೀಜಿ ಸೇವಾ ಸಮಿತಿ, ಮೇಲೂರು ಮಾತೃಮಡಿಲು ದಿವ್ಯಾಂಗ ಸೇವಾಮಂದಿರ, ಜಿಲ್ಲಾ ನವಜೀವನ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದಿವ್ಯಾಂಗ ಮಕ್ಕಳ ಪೋಷಕರ ಶೈಕ್ಷಣಿಕ ಸಮಾಲೋಚನಾ ಸಭೆ, ಉಚಿತ ನೋಟ್‌ಬುಕ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಗವಿಕಲ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಸಮಾನವಾಗಿ ಶೈಕ್ಷಣಿಕ ಸಾಧನೆ ಮಾಡಬೇಕಿದೆ. ಗ್ರಾಮೀಣ ಮಕ್ಕಳಲ್ಲಿ ಇಂಗ್ಲಿಷ್‌ ಜ್ಞಾನವನ್ನು ಬಲಪಡಿಸಿ ಆತ್ಮವಿಶ್ವಾಸ ಹೆಚ್ಚಿಸಬೇಕಿದೆ. ಆ ನಿಟ್ಟಿನಲ್ಲಿ ಇಂಗ್ಲಿಷ್‌ ಕೌಶಲಾಭಿವೃದ್ಧಿಗೆ ಆನ್‌ಲೈನ್ ಕ್ಲಾಸ್ ನಡೆಸುತ್ತಿರುವುದು ಅಭಿನಂದನೀಯ ಎಂದರು.

ADVERTISEMENT

ಶಿಕ್ಷಣ ತಜ್ಞ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ, ಪೋಷಕರು ಮಕ್ಕಳಿಗೆ ಆಸ್ತಿ ಸಂಪಾದಿಸಿ ಇಡುವುದಕ್ಕಿಂತ ಉತ್ತಮ ಶಿಕ್ಷಣ ಕೊಡಿಸಿ ಅವರನ್ನೇ ಸಮಾಜದ ಆಸ್ತಿಯನ್ನಾಗಿಸುವತ್ತ ಹೆಚ್ಚು ಒಲವು ಹೊಂದಬೇಕು. ಅಂಗವಿಕಲ ಮಕ್ಕಳಲ್ಲಿ ಅಡಗಿರುವ ಸುಪ್ತ ಕೌಶಲಗಳನ್ನು ಹೊರ ಹಾಕಿ ಉತ್ತಮ ಜ್ಞಾನ ಪಡೆಯಲು ಬೇಕಾದ ಅವಕಾಶಗಳನ್ನು ಮಾತೃಮಡಿಲು ಒದಗಿಸಲಿದೆ ಎಂದು ಹೇಳಿದರು.

ಶಿವಕುಮಾರ ಮಹಾಸ್ವಾಮೀಜಿ ಸೇವಾ ಸಮಿತಿಯಿಂದ ಅಗತ್ಯವಿರುವವರಿಗೆ ಪುನರ್ವಸತಿ ಕಲ್ಪಿಸುವ, ದಿವ್ಯಾಂಗ ಮಕ್ಕಳಿಗೆ ಇಂಗ್ಲಿಷ್‌ ಜ್ಞಾನ ತರಬೇತಿ, ವರ್ತನಾ ಥೆರಪಿ ನೀಡುವ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

ಜಿಲ್ಲಾ ನವಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಬೆಳ್ಳೂಟಿ ಮುನಿರಾಜು ಮಾತನಾಡಿ, ದಿವ್ಯಾಂಗರಿಗೆ ಅನುಕಂಪಕ್ಕಿಂತ ಅವಕಾಶಗಳು ಸಿಗಬೇಕಿದೆ. ದಿವ್ಯಾಂಗರ ಸರ್ವತೋಮುಖ ಪ್ರಗತಿಗೆ ಪೂರಕವಾದ ಯೋಜನೆಗಳು ಕೈಗೆತ್ತಿಕೊಳ್ಳುವುದರ ಜೊತೆಗೆ ಉಚಿತ ಹೆಲ್ತ್ ಕ್ಯಾಂಪ್‌ಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಮಾತೃಮಡಿಲು ದಿವ್ಯಾಂಗ ಸೇವಾ ಮಂದಿರದ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎಂ. ಜಗದೀಶ್‌ಕುಮಾರ್, ಟ್ರಸ್ಟಿ ಜಂಗಮಕೋಟೆ ಮಂಜುನಾಥ್, ಸುವರ್ಣ ಶಿವಕುಮಾರ್, ಶಿಕ್ಷಕ ರಾಘವೇಂದ್ರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.