ಗೌರಿಬಿದನೂರು: ಕೊರೊನಾ ಸೋಂಕು ಹರಡದಂತೆ ಸಾರ್ವಜನಿಕರು ಮನೆಯಲ್ಲೆ ಇದ್ದು ಸಹಕರಿಸಬೇಕು ಎಂದು ಕೋವೀಡ್-19 ವಿಶೇಷ ಅಧಿಕಾರಿ ಬಿ.ಎನ್.ವರಪ್ರಸಾದರೆಡ್ಡಿ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಗರದಲ್ಲಿ ಈಗಾಗಲೇ ಕೊರೋನಾ ಸೋಂಕಿತರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಿನಸಿ, ತರಕಾರಿ, ಹಾಲು, ಔಷಧಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೊಳ್ಳಲು ಅಂಗಡಿಗಳ ಮುಂದೆ ನಾಗರೀಕರು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳದಿರುವುದು ಸರಿಯಲ್ಲ. ಇದರಿಂದ ಸೋಂಕು ಇನ್ನಷ್ಟು ಹರಡುವ ಸಾಧ್ಯತೆಯಿದೆ ಎಂದರು.
ನಗರದ ಹಿರೇಬಿದನೂರಿನಲ್ಲಿ ಸೋಂಕು ದೃಢಪಟ್ಟಿದ್ದು, ಅಲ್ಲಿನ ಜನತೆ ಭಯಬೀತರಾಗದೇ ದೈರ್ಯದಿಂದ ಇರಬೇಕು. ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬಾರದು. ತಾಲ್ಲೂಕು ಆಡಳಿತ ಮತ್ತು ನಗರಸಭೆ ಹಾಗೂ ಸ್ವಯಂ ಸೇವಕರು ಮನೆಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯ ಮಾಡುತ್ತಾರೆ ಎಂದರು.
ತರಕಾರಿ ಕೊಳ್ಳಲು ಅನುಕೂಲವಾಗುವಂತೆ ಆಚಾರ್ಯ ಕಾಲೇಜು ಮೈದಾನ, ನಾಗಪ್ಪ ಬ್ಲಾಕ್, ಮುನಿಸಿಪಲ್ ಕಾಲೇಜು ಆವರಣ ಹಾಗೂ ಕೆ.ಇ.ಬಿ ಬಳಿಯ ಸರ್ಕಾರಿ ಶಾಲೆಯ ಬಳಿ ಮಿನಿ ತರಕಾರಿ ಮಾರುಕಟ್ಟೆಯನ್ನು ತೆರೆಯಲಾಗಿದೆ. ನಿಗದಿತ ಅವಧಿಯಲ್ಲಿ ದಿನಸಿ ಅಂಗಡಿಗಳು ತೆರೆಯುತ್ತಿದ್ದು ಅಲ್ಲಿಯೂ ಸಹ ಸಾಮಾಜಿಕ ಅಂತರವನ್ನು ಅನುಸರಿಸಿ ವ್ಯಾಪಾರ ಮಾಡಬೇಕು. ದಿನಸಿ ಅಂಗಡಿಗಳ ಮಾಲೀಕರು ಮಾಸ್ಕ್, ಗ್ಲೌಸ್ ಧರಿಸಿ ಜನತೆಗೆ ಸಾಮಾಗ್ರಿಗಳನ್ನು ನೀಡಬೇಕು ಎಂದರು.
ಡಿವೈಎಸ್ಪಿ ರವಿಶಂಕರ್, ತಹಶೀಲ್ದಾರ್ ಎಂ.ರಾಜಣ್ಣ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎನ್.ಮುನಿರಾಜು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.