ಚಿಂತಾಮಣಿ: ‘ರಾಜ್ಯದಲ್ಲಿ 2009ರಲ್ಲಿ ಸಮಗ್ರ ಜಲಾನಯನ ನಿರ್ವಹಣಾ ಯೋಜನೆ ಅನುಷ್ಠಾನವಾಯಿತು. ಮಣ್ಣು, ನೀರು, ಪರಿಸರ ಸಂರಕ್ಷಣೆಯ ಮೂಲಕ ಅಂತರ್ಜಲವನ್ನು ವೃದ್ಧಿಗೊಳಿಸುವುದು ಯೋಜನೆಯ ಉದ್ದೇಶವಾಗಿದೆ’ ಎಂದು ಕೃಷಿ ಇಲಾಖೆಯ ಕುರುವಲು ಚಿಂತಾಮಣಿ ಉಪ ಜಲಾನಯನ ಅಭಿವೃದ್ಧಿ ಇಲಾಖೆಯ ತಂಡದ ನಾಯಕ ಪಾಪಿರೆಡ್ಡಿ ತಿಳಿಸಿದರು.
ತಾಲ್ಲೂಕಿನ ಕುರುಬೂರು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಕುರುವಲು ಚಿಂತಾಮಣಿ ಉಪ ಜಲಾನಯನ ಅಭಿವೃದ್ಧಿ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದರು.
‘ಬರಗಾಲ ತಡೆಯುವಿಕೆ ಯೋಜನೆಯ ಒಂದು ಭಾಗವಾಗಿದೆ. ರಾಜ್ಯದ 29 ಜಿಲ್ಲೆಗಳಲ್ಲಿ 100 ತಾಲ್ಲೂಕುಗಳನ್ನು ಯೋಜನೆಯಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ನಮ್ಮ ತಾಲ್ಲೂಕಿನಲ್ಲಿ 8 ಗ್ರಾಮ ಪಂಚಾಯಿತಿಗಳ 30 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಯ್ಕೆ ಮಾಡಿಕೊಂಡಿರುವ ಹಳ್ಳಿಗಳಲ್ಲಿರುವ ಪ್ರತಿಯೊಬ್ಬ ಮನೆಯವರು ನಿಗದಿತ ನಮೂನೆಯಲ್ಲಿ ತಮ್ಮ ಕುಟುಂಬಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ದಾಖಲಿಸಬೇಕು’ ಎಂದು ಮನವಿ ಮಾಡಿದರು.
‘ಕುರುಬೂರು ಗ್ರಾಮ ಪಂಚಾಯಿತಿಯಲ್ಲಿ ಕುರುಬೂರು, ಗಾಜಲಹಳ್ಳಿ, ನಕ್ಕಲಹಳ್ಳಿ ಮತ್ತು ಬಂದಾರ್ಲಹಳ್ಳಿ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು ನಕ್ಕಲಹಳ್ಳಿ ಗ್ರಾಮವು ಬೆಜಾರುಕ್ ಆಗಿದೆ. ಆಯ್ಕೆಯಾದ ಗ್ರಾಮಗಳಲ್ಲಿ ಜಮೀನಿನಲ್ಲಿ ಬದುಗಳ ನಿರ್ಮಾಣ ಮಾಡಿಕೊಳ್ಳಬೇಕು. ಮಣ್ಣು ಕೊರೆಯುವುದನ್ನು ತಡೆಯಲು ಚೆಕ್ ಡ್ಯಾಂ, ತೊಡೆ ಅಣೆಕಟ್ಟು ನಾಳು ಬದುಗಳು, ಕೃಷಿ ಹೊಂಡ, ಮಾಡಿಕೊಳ್ಳಬಹುದು. ಜನರ ಸಹಭಾಗತ್ವದಲ್ಲಿ ಜನರು ಮತ್ತು ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ನಿರ್ವಹಿಸುತ್ತಾರೆ’ ಎಂದರು.
‘ಯೋಜನೆಯಲ್ಲಿ ದುರುಪ ಯೋಗವಾಗುವುದಿಲ್ಲ. ಕಾರ್ಯಕಾರಿ ಸಮಿತಿ ರಚನೆ ಸ್ವಸಹಾಯ ಸಂಘಗಳನ್ನು ಮಾಡಿಕೊಳ್ಳಬೇಕು ಕಾರ್ಯಕಾರಿ ಸಮಿತಿಯಲ್ಲಿ ಆ ಭಾಗದಲ್ಲಿರುವ ಜಮೀನು ಉಳ್ಳವರು ಮಾತ್ರ ಸದಸ್ಯರಾಗುತ್ತಾರೆ. ಯೋಜನೆಯನ್ನು ಕಾರ್ಯಗತಗೊಳಿಸಲು ಅಗತ್ಯವಾದ ತರಬೇತಿಯನ್ನು ನೀಡುತ್ತೇವೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆನಂದ್, ಉಪಾಧ್ಯಕ್ಷ ಕೆ.ಎ.ನಂಜೇಗೌಡ, ಸದಸ್ಯರಾದ ಕೆ.ವಿ.ಶ್ರೀನಿವಾಸಗೌಡ, ಕೆ.ಎ.ಅಶೋಕ್, ಶಶಿಕಲಾಶಿವಣ್ಣ, ವರಲಕ್ಷ್ಮೀರಮೇಶ್, ಮಲ್ಲಿಕಾರ್ಜುನಗೌಡ, ಮುಖಂಡರಾದ ನೇತಾಜಿ, ಚಂದ್ರಶೇಖರ್ಗೌಡ, ನಿವೃತ್ತ ಶಿಕ್ಷಕ ಮುನಿಯಪ್ಪ, ನಾರಾಯಣ್ ರಾಜ್, ಜಲಾನಯನದ ಮುನಿ ಆಂಜಪ್ಪ, ಗೋಪಾಲಕೃಷ್ಣ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.