ಚೇಳೂರು: ಪಾತಪಾಳ್ಯ ಹೋಬಳಿಯ ನಾರೇಮದ್ದೆಪಲ್ಲಿ ಗ್ರಾಮ ಪಂಚಾಯ್ತಿ ಶಿವಪುರ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಹೋಗುವ ಮುಖ್ಯರಸ್ತೆಯು ಕೆಸರು ಗದ್ದೆಯಂತಾಗಿದೆ.
ಈ ರಸ್ತೆಯಲ್ಲಿ ಆಸ್ಪತ್ರೆ ಹೋಗುವವರು ಹಾಗೂ ರೈತರು ಹೊಲಗಳಿಗೆ ಹೋಗುತ್ತಾರೆ. ಆದರೆ, ಇಲ್ಲಿ ಸಂಚರಿಸುವುದು ಕಷ್ಟಸಾಧ್ಯವಾಗಿದ್ದು, ಜನರು ಸಂಕಷ್ಟದಲ್ಲಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ.
ಈ ರಸ್ತೆಯಲ್ಲಿ ಚರಂಡಿ ಇದ್ದು ಇಲ್ಲದಂತಾಗಿದೆ. ಚರಂಡಿಯಲ್ಲಿ ಕಸದ ರಾಶಿ ಹಾಗೂ ಮಣ್ಣು ಮುಚ್ಚಿದ್ದರಿಂದ ಚರಂಡಿ ನೀರು ಹಾಗೂ ಮಳೆ ನೀರು ರಸ್ತೆಯಲ್ಲಿ ಶೇಖರಣೆಯಾಗಿ ಕೆಸರು ಗದ್ದೆಯಾಗಿದೆ. ರಸ್ತೆಯಲ್ಲಿ ನೀರು ತುಂಬಿದ್ದರಿಂದ ಮಕ್ಕಳು, ವೃದ್ಧರು, ಅನಾರೋಗಸ್ಥರು ಓಡಾಡಬೇಕಾದರೆ ಎಲ್ಲಿ ಕಾಲಿಡಬೇಕೆಂದು ಗೊತ್ತಾಗದೇ ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ಬೀಳುತ್ತಾರೆ ಎಂದು ಸ್ಥಳೀಯರು ಆರೋಪಿಸಿದರು.
ಮಳೆಯ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ದುರ್ವಾಸನೆ ಹಾಗೂ ಜನತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗುತ್ತದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
‘ಎಲ್ಲೆಡೆ ಸ್ವಚ್ಛ ಭಾರತ್ ಎಂದು ಘೋಷಣೆಯಾಗುತ್ತಿದ್ದು, ಶಿವಪುರ ಗ್ರಾಮದಲ್ಲಿ ಮಾತ್ರ ಸ್ವಚ್ಛ ಭಾರತ್ ಮರೀಚಿಕೆಯಾಗಿದೆ. ಗ್ರಾಮದಲ್ಲಿ ಸುತ್ತಮುತ್ತಲಿನ ರಸ್ತೆ ಹಾಗೂ ಚರಂಡಿಗಳು ಕೂಡ ಇದೇ ರೀತಿಯಾಗಿದ್ದು, ಯಾವೊಬ್ಬ ಅಧಿಕಾರಿಗಳು ಇತ್ತ ಗಮನ ಕೊಟ್ಟು ಅದನ್ನು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ ಅವರಿಗೆ ಇಲ್ಲಿ ಕೇಳುವವರು, ಹೇಳುವವರು ಯಾರು ಇಲ್ಲದಂತಾಗಿದೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.