ಗುಡಿಬಂಡೆ: ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿಯ ಪೋಲಂಪಲ್ಲಿ ಕಂದಾಯ ವೃತ್ತದಲ್ಲಿರುವ ಹೊಸಚಿಗುರು ಉನ್ನತಿ ಎಸ್ಟೇಟ್ನಲ್ಲಿ ಪರವಾನಗಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಬಳಸಿ ಖರಾಬು ಜಮೀನಿನಲ್ಲಿದ್ದ ಬಂಡೆಗಳನ್ನು ಸ್ಫೋಟಿಸಲಾಗಿದೆ.
ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿದ್ದು ಟ್ರಾಕ್ಟರ್ ಮತ್ತು ನಿರ್ಮಾಣ ಯಂತ್ರ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಸದಾಶಿವನಹಳ್ಳಿ ಗ್ರಾಮದ ಬಳಿಯ ಗಡ್ಡನಾಗನದಿನ್ನೆ ಗ್ರಾಮದ ಸರ್ವೆ ನಂ. 5/8ರ ಹೊಸಚಿಗುರು ಎಸ್ಟೇಟ್ನಲ್ಲಿನ ಕಲ್ಲು ಬಂಡೆ ಪ್ರದೇಶವನ್ನು ಪರವಾನಗಿ ಇಲ್ಲದೆ ಜಿಲೆಟಿನ್ ಸಿಡಿಮದ್ದು ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಬಳಸಿ ಸ್ಫೋಟಿಸುತ್ತಿದ್ದಾರೆ’ ಎನ್ನುವ ಮಾಹಿತಿ ಜುಲೈ 16 ರಂದು ಗುಡಿಬಂಡೆ ಪೊಲೀಸರಿಗೆ ದೊರೆತಿತ್ತು.
ಸಬ್ಇನ್ಸ್ಪೆಕ್ಟರ್ ಗಣೇಶ್ ಹಾಗೂ ಸಿಬ್ಬಂದಿ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಪೊಲೀಸ್ ಜೀಪ್ ಕಂಡು ಕಲ್ಲು ಬಂಡೆ ಸ್ಫೋಟಿಸುತ್ತಿದ್ದ ಕಾರ್ಮಿಕರು, ವಾಹನ ಚಾಲಕರು ಸ್ಥಳದಿಂದ ಪರಾರಿಯಾದರು.
ಕಲ್ಲುಬಂಡೆ ಕೊರೆದು ಅದರಲ್ಲಿ ಸಿಡಿಮದ್ದು ತುಂಬಿಸಿ ಸ್ಫೋಟಿಸಿರುವುದು ಕಂಡು ಬಂದಿದೆ. ಅಕ್ರಮವಾಗಿ ಕಲ್ಲುಬಂಡೆ ಒಡೆಯಲು ಉಪಯೋಗಿಸಿರುವ ಯಂತ್ರಗಳು ಮತ್ತು ಟ್ರಾಕ್ಟರ್, ಕಂಪ್ರೆಷರ್ ವಶಕ್ಕೆ ಪಡೆಯಲಾಗಿದೆ. ಹೊಸ ಚಿಗುರು ಉನ್ನತಿ ಮಾಲೀಕರು ಮತ್ತು ಓಡಿ ಹೋದವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.
ಈ ಹಿಂದೆ ಹಿರೇನಾಗವಲ್ಲಿ ಬೆಟ್ಟದಲ್ಲಿ ಅಕ್ರಮವಾಗಿ ಜಿಲೆಟಿನ್ ಸ್ಫೋಟಿಸಿ ನಾಲ್ವರು ಮೃತಪಟ್ಟಿದ್ದರು. ಅಂದು ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಸಚಿವರು ಸೇರಿದಂತೆ ಉನ್ನತ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.