ADVERTISEMENT

ಶಿಡ್ಲಘಟ್ಟ: ಸೈನ್ಸ್‌ ಫೋರಂ ಉದ್ಘಾಟನೆ

ಮಕ್ಕಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:17 IST
Last Updated 8 ಮಾರ್ಚ್ 2021, 5:17 IST
ಶಿಡ್ಲಘಟ್ಟ ತಾಲ್ಲೂಕಿನ ಮೊಟ್ಟಮೊದಲ ಸೈನ್ಸ್ ಫೋರಂ, ಆರೋಹಿ ಸೈನ್ಸ್ ಕ್ಲಬ್ ಹಾಗೂ ಅದರ ಬ್ಲಾಗ್ ಉದ್ಘಾಟಿಸಿದ ನಾಗಾರ್ಜುನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ್ ಅವರಿಗೆ ‘ಆರೋಹಿ ಸೈನ್ಸ್ ಕ್ಲಬ್’ ಸದಸ್ಯರು ಪುಸ್ತಕ ನೀಡಿ ಗೌರವಿಸಿದರು
ಶಿಡ್ಲಘಟ್ಟ ತಾಲ್ಲೂಕಿನ ಮೊಟ್ಟಮೊದಲ ಸೈನ್ಸ್ ಫೋರಂ, ಆರೋಹಿ ಸೈನ್ಸ್ ಕ್ಲಬ್ ಹಾಗೂ ಅದರ ಬ್ಲಾಗ್ ಉದ್ಘಾಟಿಸಿದ ನಾಗಾರ್ಜುನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ್ ಅವರಿಗೆ ‘ಆರೋಹಿ ಸೈನ್ಸ್ ಕ್ಲಬ್’ ಸದಸ್ಯರು ಪುಸ್ತಕ ನೀಡಿ ಗೌರವಿಸಿದರು   

ಶಿಡ್ಲಘಟ್ಟ: ಮಕ್ಕಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾಕೆ, ಹೇಗೆ, ಎಲ್ಲಿ, ಯಾವಾಗ ಮುಂತಾದ ಪ್ರಶ್ನೆಗಳು ಮನದಲ್ಲಿ ಮೂಡುತ್ತಿದ್ದರೆ ಉತ್ತರಕ್ಕಾಗಿ ಹುಡುಕಾಟ ನಡೆಸಿದಾಗ ವಿಜ್ಞಾನದ ಕೌತುಕಗಳು ಕಣ್ಮುಂದೆ ತೆರೆದುಕೊಳ್ಳುತ್ತವೆ. ಅದುವೇ ವಿಜ್ಞಾನದ ರಹದಾರಿ ಎಂದು ನಾಗಾರ್ಜುನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ್ ತಿಳಿಸಿದರು.

ನಗರದ ಕೆ.ಎಚ್.ಬಿ ಕಾಲೊನಿಯ ನಿವೃತ್ತ ಶಿಕ್ಷಕ ಸುಂದರನ್ ಅವರ ಶ್ರೀನಿಲಯದಲ್ಲಿ ಭಾನುವಾರ ತಾಲ್ಲೂಕಿನ ಮೊಟ್ಟ ಮೊದಲ ಸೈನ್ಸ್ ಫೋರಂ, ಆರೋಹಿ ಸೈನ್ಸ್ ಕ್ಲಬ್ ಹಾಗೂ ಅದರ ಬ್ಲಾಗ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಿನ ಮಕ್ಕಳು ಪ್ರತಿಭಾವಂತರಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಬೇಕಿದೆ. ವಿಜ್ಞಾನದ ಪ್ರಯೋಗಗಳನ್ನು ಮಕ್ಕಳೇ ಸ್ವತಃವಾಗಿ ಮಾಡುವ ವಾತಾವರಣ ರೂಪಿಸಬೇಕು. ಆಗ ಮಕ್ಕಳು ವಿಜ್ಞಾನವನ್ನು ಸಂತಸದಿಂದ ತಮ್ಮ ಬದುಕಿನ ಭಾಗವಾಗಿ ಸ್ವೀಕರಿಸುವರು ಎಂದರು.

ADVERTISEMENT

ತಾಲ್ಲೂಕು ಕೇಂದ್ರದಲ್ಲಿ ಸೈನ್ಸ್ ಫೋರಂ ಪ್ರಾರಂಭವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಎಳೆಯರನ್ನು ವಿಜ್ಞಾನದೆಡೆಗೆ ಆಕರ್ಷಿಸುವ ಕೆಲಸವಾಗಲಿ. ವಿಜ್ಞಾನದ ಸಾಧಕರನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಅವರಲ್ಲಿ ಜ್ಞಾನದ ಕಿಡಿಯನ್ನು ಹೊತ್ತಿಸಿ ವಿಜ್ಞಾನದ ಒಲಂಪಿಕ್ ಓಟಕ್ಕೆ ಯುವಪೀಳಿಗೆಯನ್ನು ಮುನ್ನಡೆಸಿ
ಎಂದರು.

ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ಎಂ.ಎ. ರಾಮಕೃಷ್ಣ ಮಾತನಾಡಿ, ಬೆಳಿಗ್ಗೆಯಿಂದ ಸಂಜೆವರೆಗೂ ನಮ್ಮ ದಿನಚರಿ ಹಾಗೂ ಸುತ್ತಲಿನ ಪ್ರಕೃತಿಯಲ್ಲಿ ವಿಜ್ಞಾನ ಹಾಸುಹೊಕ್ಕಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅದರೆಡೆಗೆ ಆಕರ್ಷಿಸುವುದು ನಾವು ಮಾಡಬೇಕಾದ ಕೆಲಸ. ಆರೋಹಿ ಸೈನ್ಸ್ ಕ್ಲಬ್ ಮೂಲಕ ಈ ಕೆಲಸವಾಗಲಿ ಎಂದು ಆಶಿಸಿದರು.

ಆರೋಹಿ ಸೈನ್ಸ್ ಕ್ಲಬ್ ಸಂಚಾಲಕ ಓಂ ದೇಶಮುದ್ರೆ ಮಾತನಾಡಿ, ವಿಜ್ಞಾನವನ್ನು ಸಂವಹನ ಮಾಧ್ಯಮಗಳ ಮೂಲಕ ಎಲ್ಲೆಡೆ ಪಸರಿಸುವ ಹಾಗೂ ವಿಜ್ಞಾನದೊಂದಿಗೆ ಒಂದಾಗುವ ಕಾರ್ಯವನ್ನು ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

‘ಆರೋಹಿ ಸೈನ್ಸ್ ಕ್ಲಬ್’ ಸಹ ಸಂಚಾಲಕ ಅಜಿತ್ ಕೌಂಡಿನ್ಯ ಮಾತನಾಡಿ, ಜ್ಞಾನದಿಂದ ವಿಜ್ಞಾನದೆಡೆಗೆ ಸಾಗೋಣ ಎಂಬ ಮಾತಿನಂತೆ, ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳನ್ನು ಮಾಡುವ ಉದ್ದೇಶದಿಂದ ಆರೋಹಿ ಸೈನ್ಸ್ ಕ್ಲಬ್ ಎಂಬ ಸೈನ್ಸ್ ಫೋರಂ ಪ್ರಾರಂಭಿಸಿದ್ದೇವೆ. ಇದರ ಬ್ಲಾಗ್ ಪ್ರಾರಂಭಿಸಿದ್ದು, ಶಾಲಾ ಮಕ್ಕಳು ಬರೆಯುವ ವಿಜ್ಞಾನದ ಲೇಖನಗಳನ್ನು ಪ್ರಕಟಿಸಲಾಗುವುದು. ನಾಲ್ಕು ಪುಟಗಳ ಇ– ಪುಸ್ತಕ ಕೂಡ ಹೊರತರಲಾಗುವುದು. ಶಾಲೆಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡಿ, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟಿಸುವ ಪ್ರಯತ್ನ ಮಾಡುತ್ತೇವೆ ಎಂದು ವಿವರಿಸಿದರು.

ನಿವೃತ್ತ ಶಿಕ್ಷಕ ಸುಂದರನ್, ಕ್ರೆಸೆಂಟ್ ವಿದ್ಯಾಸಂಸ್ಥೆ ಕಾರ್ಯದರ್ಶಿ ತಮೀಮ್ ಅನ್ಸಾರಿ, ಶಿಕ್ಷಕ ಪ್ರಕಾಶ್, ಕನ್ನಡ ಸಾರಸ್ವತ ಪರಿಚಾರಿಕ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ, ಶಿಕ್ಷಕ ನಾಗಭೂಷಣ್, ಗೌಡನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.