ಚಿಕ್ಕಬಳ್ಳಾಪುರ: ‘ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಕೊನೆಯ ಭಾಷಣದಲ್ಲಿ ಪೊಲೀಸರು ಸೇರಿದಂತೆ ಎಲ್ಲ ಅಧಿಕಾರಿಗಳು ನನಗೆ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದ್ದರು. ಅವರು ಮುಖ್ಯಮಂತ್ರಿ ಆಗಿದ್ದಾಗ ಪೊಲೀಸರು ಒಳ್ಳೆಯವರಾಗಿದ್ದರಾ? ಅಧಿಕಾರ ಹೋದ ತಕ್ಷಣವೇ ಪೊಲೀಸರು ಕೆಟ್ಟವರಾಗುತ್ತಾರಾ?’ ಎಂದು ಶಾಸಕ ಡಾ.ಕೆ.ಸುಧಾಕರ್ ಟೀಕಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ಆರೋಪಿ ಆದಿತ್ಯ ರಾವ್ ಮಾನಸಿಕ ಅಸ್ವಸ್ಥನಲ್ಲ ಎಂದು ಹೇಳಿಕೆ ಕೊಡುತ್ತಿರುವ ರಾಜಕಾರಣಿಗಳು ಯಾವಾಗ ವೈದ್ಯರಾಗಿದ್ದರು? ಯಾವಾಗ ವಿಧಿವಿಜ್ಞಾನ ತಜ್ಞರಾಗಿದ್ದರೊ ನನಗೆ ಗೊತ್ತಿಲ್ಲ. ರಾಜ್ಯದ ಗೃಹಸಚಿವರೊಬ್ಬರು ಜವಾಬ್ದಾರಿಯಿಂದ ಹೇಳಿಕೆ ಕೊಟ್ಟಾಗ ಅದನ್ನು ಸ್ವೀಕಾರ ಮಾಡುವಂತಹ ಕನಿಷ್ಠ ಜ್ಞಾನವಾದರೂ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರಿಗೆ ಇರಬೇಕಿತ್ತು. ಇದು ದುರದೃಷ್ಟಕರ’ ಎಂದು ಹೇಳಿದರು.
‘ರಾಜಕೀಯವಾಗಿ ಬಹಳ ನಷ್ಟವಾದ್ದರಿಂದ ಕುಮಾರಸ್ವಾಮಿ ಅವರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಪೊಲೀಸ್ ವ್ಯವಸ್ಥೆಯನ್ನು ಖಂಡಿಸುವ ಜತೆಗೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಅದು ಒಳ್ಳೆಯದಲ್ಲ. ವ್ಯವಸ್ಥೆ ವಿರುದ್ಧವಾಗಿ ಮುಖ್ಯಸ್ಥರಾದವರು ಮಾತನಾಡಿದರೆ ಜನರು ನಂಬಿಕೆ ಕಳೆದುಕೊಳ್ಳುತ್ತಾರೆ. ಜನರು ನಂಬಿಕೆ ಕಳೆದುಕೊಂಡರೆ ಯಾರು ಕಾನೂನು ಸುವ್ಯವಸ್ಥೆ ಕಾಪಾಡುವುದು? ಆದ್ದರಿಂದ ವ್ಯವಸ್ಥೆಯ ಮೇಲೆ ಗೌರವ ಇಡಿ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.