ADVERTISEMENT

ರೈತರಿಲ್ಲದ ಜಗತ್ತು ಕಲ್ಪಿಸಿಕೊಳ್ಳುವುದು ಅಸಾಧ್ಯ

ಕಾಗತಿಯಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 4:19 IST
Last Updated 29 ಡಿಸೆಂಬರ್ 2022, 4:19 IST
ಚಿಂತಾಮಣಿ ತಾಲ್ಲೂಕಿನ ಕಾಗತಿಯಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕಿ ಎಂ.ಅನುರೂಪ ಉದ್ಘಾಟಿಸಿದರು
ಚಿಂತಾಮಣಿ ತಾಲ್ಲೂಕಿನ ಕಾಗತಿಯಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕಿ ಎಂ.ಅನುರೂಪ ಉದ್ಘಾಟಿಸಿದರು   

ಚಿಂತಾಮಣಿ: ರೈತರಿಲ್ಲದ ಜಗತ್ತು ಕಲ್ಪಿಸಿಕೊಳ್ಳುವುದು ಅಸಾಧ್ಯ. ಸಾರ್ವಜನಿಕರ ನಿತ್ಯದ ಊಟದ ಹಿಂದೆ ರೈತನ ಶ್ರಮವಿದೆ. ಇಡೀ ಜಗತ್ತುಬೆಳಗುವ ರೈತ ಯಾವಾಗಲೂ ತೆರೆಮರೆಯಲ್ಲೇ ಇರುತ್ತಾನೆ. ಅವರ ಸಂಕಟ, ನೋವು ದುಮ್ಮಾನಗಳಿಗೆ ಎಣೆಯೇ ಇಲ್ಲ. ಆದರೂ, ನೇಗಿಲು ಹೊತ್ತ ಯೋಗಿ ತನ್ನ ಕಾಯಕ ಮಾಡುತ್ತಲೇ ಇರುತ್ತಾನೆ ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ಎಂ.ಅನುರೂಪ ತಿಳಿಸಿದರು.

ತಾಲ್ಲೂಕಿನ ಕಾಗತಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಜನ್ಮದಿನವಾದ ಡಿ.23 ರಂದು ರಾಷ್ಟ್ರೀಯ ರೈತ ದಿನವಾಗಿ ಆಚರಿಸಲಾಗುತ್ತಿದೆ. ಅವರಿಗೆ ರೈತರ ಸಮಸ್ಯೆಗಳ ಬಗ್ಗೆ ಅರಿವು ಇತ್ತು ಮತ್ತು ಅಷ್ಟೇ ವೇಗದಲ್ಲಿ ಅವರ ಪರವಾಗಿ ಕೆಲಸ ಮಾಡಲು ಅವರಿಗೆ ಸಾಧ್ಯವಾಯಿತು. ರೈತ ನಾಯಕನಾಗಿದ್ದ ಅವರು ಅಷ್ಟೇ ಸಶಕ್ತ ಬರಹಗಾರರೂ ಹೌದು. ಭಾರತದಲ್ಲಿನ ರೈತರ ಸಮಸ್ಯೆ ಮತ್ತು ಪರಿಹಾರ ಕುರಿತು ಪುಸ್ತಕ ‌ಬರೆದಿದ್ದಾರೆ. ರೈತರೊಬ್ಬರು ದೇಶದ ಉನ್ನತ ಪದವಿಗೇರಬಹುದು ಎಂಬುದನ್ನು ತೋರಿಸಿಕೊಟ್ಟರು ಎಂದರು.

ADVERTISEMENT

ಈಚೆಗೆ ತಾಲ್ಲೂಕು ಕಚೇರಿಯಲ್ಲಿ ವಿವಿಧ ಇಲಾಖೆ ಕೆಲ ಸಿಬ್ಬಂದಿಹಣದ ಆಸೆಗೆ ಬಿದ್ದು ಲೋಕಾಯುಕ್ತರಿಗೆ ಸಿಕ್ಕಿ ಬೀಳುತ್ತಿದ್ದಾರೆ. ಹೊರ ತಾಲ್ಲೂಕಿನ ರೈತರು ಈ ಬಗ್ಗೆ ಮಾತನಾಡಿದಾಗ ಬೇಸರವಾಗುತ್ತದೆ ಎಂದರು.

ತಹಶೀಲ್ದಾರ್ ಮುನಿಶಾಮಿರೆಡ್ಡಿ ಮಾತನಾಡಿ, ಕಾನೂನುಬದ್ದ ಕೆಲಸ ನಡೆಯದೇ ಇದ್ದಲ್ಲಿ ಅಥವಾ ಅಂತಹ ಕೆಲಸ ಮಾಡಿಕೊಳ್ಳಲು ಯಾರಾದರೂ ಲಂಚ ಕೇಳಿದರೆ ಗಮನಕ್ಕೆ ತನ್ನಿ ಎಂದು ಹೇಳಿದರು.

ಸನ್ಮಾನ: ಕೃಷಿ ಇಲಾಖೆ ವತಿಯಿಂದ ಚಿಲಕಲನೇರ್ಪು ಹೋಬಳಿ ಚಿನ್ನಪಲ್ಲಿ ಶಿವಾರೆಡ್ಡಿ, ಕುರುಬೂರು ಮುನಿಯಪ್ಪ, ಮುಂಗಾನಹಳ್ಳಿ ಹೋಬಳಿ ಸೋಮಕಲಹಳ್ಳಿ ವೆಂಕಟರೆಡ್ಡಿ, ಮುರಗಮಲೆ ಹೋಬಳಿ ಬಾರ್ಲಹಳ್ಳಿ ಮುನಿಸ್ವಾಮಿರೆಡ್ಡಿ, ತೋಟಗಾರಿಕೆ ಇಲಾಖೆಯಿಂದ ಕಸಬಾ ಹೋಬಳಿ ಚೆನ್ನಕೇಶವಪುರದ ಪುಷ್ಪ, ಕೈವಾರ ಹೋಬಳಿ ಜಂಗಮಶೀಗೆಹಳ್ಳಿ ಮಂಜುನಾಥ, ಅಂಬಾಜಿದುರ್ಗ ಹೋಬಳಿ ಕತ್ತರಿಗುಪ್ಪೆ ಹರೀಶ್, ರೇಷ್ಮೆ ಇಲಾಖೆಯಿಂದ ಕೈವಾರ ಹೋಬಳಿ ಹೀರೇಕಟ್ಟಿಗೇನಹಳ್ಳಿ ಮುನಿರೆಡ್ಡಿ, ಕೈವಾರ ಹೋಬಳಿ ತಳಗವಾರ ಹರಿನಾಥ್, ಅಂಬಾಜಿದುರ್ಗ ಹೋಬಳಿ ಉಪ್ಪಾರಪೇಟೆ ಪಾರ್ವತಮ್ಮ, ಪಶುಸಂಗೋಪನಾ ಇಲಾಖೆ ವತಿಯಿಂದ ಕಸಬಾ ಹೋಬಳಿ ಕುರುಬೂರು ಮಲ್ಲಿಕಾರ್ಜುನಗೌಡ, ಅಂಬಾಜಿದುರ್ಗ ಹೋಬಳಿ ಕತ್ತರಿಗುಪ್ಪೆ ರಂಗಮ್ಮ, ಸುಜ್ಜನಹಳ್ಳಿ ಅಶ್ವತ್ಥರೆಡ್ಡಿ, ಅರಣ್ಯ ಇಲಾಖೆ ವತಿಯಿಂದ ಕಸಬಾ ಹೋಬಳಿ ಕಾಗತಿ ಪಾಪಿರೆಡ್ಡಿ, ಕೈವಾರ ಹೋಬಳಿ ಮುತ್ತಕದಹಳ್ಳಿ ಎಂ.ಅಶೋಕ್ ರೆಡ್ಡಿ, ಮಸ್ತೇನಹಳ್ಳಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಇಒ ರವಿಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ, ತೋಟಗಾರಿಕೆ ಇಲಾಖೆ ರಜಿನಿ, ರೇಷ್ಮೆ ಇಲಾಖೆ ಆಂಜನೇಯರೆಡ್ಡಿ, ಅರಣ್ಯ ಇಲಾಖೆ ಚಿತ್ರ, ತಾಲ್ಲೂಕು ಕೃಷಿಕ ಸಮಾಜ ತಾಲ್ಲೂಕು ಅಧ್ಯಕ್ಷ ಗೋವಿಂದಪ್ಪ, ಉಪಾಧ್ಯಕ್ಷ ಪಟೇಲ್ ಅಶ್ವತ್ಥನಾರಾಯಣರೆಡ್ಡಿ, ಕಾಗತಿ ಪಟೇಲ್ ಬೈರಾರೆಡ್ಡಿ ನಿರ್ದೇಶಕರಾದ ರೆಡ್ಡಪ್ಪ, ಲಕ್ಷ್ಮಣ್ ರೆಡ್ಡಿ, ಆಂಜನೇಯರೆಡ್ಡಿ, ಶ್ರೀನಿವಾಸರೆಡ್ಡಿ, ಪ್ರಗತಿಪರ ರೈತ ಶ್ರೀನಿವಾಸಗೌಡ, ಚಂದ್ರೇಗೌಡ, ಸೀಕಲ್ ರಮಣಾರೆಡ್ಡಿ, ತಿಮ್ಮರಾಯಪ್ಪ, ವೆಂಕಟರಾಯಪ್ಪ, ಶ್ರೀನಿವಾಸರೆಡ್ಡಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.