ಸುಧಾಕರ್
ಚಿಕ್ಕಬಳ್ಳಾಪುರ: ‘ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ನವರು ಶೇ 40ರಷ್ಟು ಕಮಿಷನ್ ಎಂದು ಸುಳ್ಳು ಆರೋಪ ಮಾಡಿದರು. ಆಗ ಇವರ ಬಳಿ ಯಾವ ಪುರಾವೆ ಇತ್ತು ಎಂದು ಸಂಸದ ಡಾ.ಕೆ.ಸುಧಾಕರ್ ಪ್ರಶ್ನಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದಾರೆ. ಹೀಗಿದ್ದರೂ ಸಚಿವರು ಸಾಕ್ಷ್ಯಧಾರಗಳು ಇಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಇದೇ ಗುತ್ತಿಗೆದಾರರ ಸಂಘವು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿತ್ತು. ಆಗ ಯಾವ ಸಚಿವರು, ಅಧಿಕಾರಿಗಳು ಕಮಿಷನ್ ಪಡೆದಿದ್ದಾರೆ ಎನ್ನುವ ಪುರಾವೆಗಳು ಇದ್ದವು ಎಂದು ಪ್ರಶ್ನಿಸಿದರು.
ರಾಜಕೀಯ ತೆವಲಿಗೆ ‘ಫೇ ಸಿ.ಎಂ’ ಎಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪೋಸ್ಟರ್ಗಳನ್ನು ಅಂಟಿಸಿದರು. ಆದರೆ ಈಗ ಗುತ್ತಿಗೆದಾರರ ಸಂಘದ ಆರೋಪಗಳಿವೆ ಪುರಾವೆಗಳು ಇಲ್ಲ ಎನ್ನುತ್ತಾರೆ ಎಂದು ಹೇಳಿದರು.
ನಾನು ಕಾಂಗ್ರೆಸ್ನಲ್ಲಿದ್ದ ವೇಳೆ ಅಂದೇ ಎಚ್.ಡಿ.ಕುಮಾರಸ್ವಾಮಿ ಅವರು ಇದು ಎತ್ತಿನಹೊಳೆಯಲ್ಲ ಹಣದ ಹೊಳೆ ಎಂದಿದ್ದರು. ಅವರ ಮಾತು ಸತ್ಯವಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ಈ ಯೋಜನೆ ರೂಪಿಸಲಾಗಿತ್ತು. ಸಾವಿರಾರು ಕೋಟಿ ವೆಚ್ಚವಾದರೂ ಇನ್ನೂ ಈ ಜಿಲ್ಲೆಗಳಿಗೆ ನೀರು ಬಂದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.